ಹಾವೇರಿ:ಲಡಾಖ್ ಗಡಿಯಲ್ಲಿ ಸೋಮವಾರ ರಾತ್ರಿ ಚೀನಾ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಮೈತ್ರಿ ಮಂತ್ರ ಜಪಿಸುತ್ತಲೇ ಭಾರತದ ಬೆನ್ನಿಗೆ ಇರಿಯುವ ಕೆಲಸವನ್ನು ಮಾಡುತ್ತಿರುವ ಚೀನಾ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಕೈಗೊಂಡ ಪ್ರತಿಭಟನೆ ವೇಳೆ, ಚೀನಾ ಉತ್ಪಾದಿತ ವಸ್ತುಗಳನ್ನು ಸುಡುವ ಮೂಲಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರು ಕೂಡಾ ಚೀನಾ ವಸ್ತುಗಳನ್ನು ಬಳಸದೆ, ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ‘ಭಾರತದ ಶಾಂತ ಸ್ವಭಾವವನ್ನು ಚೀನಾ ದುರುಪಯೋಗ ಪಡಿಸಿಕೊಂಡರೆ ಸುಮ್ಮನಿರಲು ಭಾರತ ನೆಹರೂ ನಾಯಕತ್ವದ ಸರ್ಕಾರವನ್ನು ಹೊಂದಿಲ್ಲ. ಬದಲಾಗಿ ತಲೆಗೆ ತಲೆಗಳ ಪ್ರತ್ಯುತ್ತರ ನೀಡುವ ಧೀಮಂತ ನಾಯಕ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಸುರಕ್ಷಿತವಾಗಿರಲಿದೆ ಎಂದು ಹೇಳಿದರು.