ಬ್ಯಾಡಗಿ: ತಾಲ್ಲೂಕಿನ ಶಿಡೇನೂರ, ಮತ್ತೂರು, ದೂಳಿಕೊಪ್ಪ, ಹಿರೇಹಳ್ಳಿ, ಗ್ರಾಮಸ್ಥರಲ್ಲಿ ನಾಲ್ಕು ತಿಂಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಸೋಮವಾರ ಬೆಳಿಗ್ಗೆ ಚಿನ್ನಿಕಟ್ಟಿ ಗ್ರಾಮದ ಬಳಿ ಇಡಲಾಗಿದ್ದ ಬೋನಿನಲ್ಲಿ ಸೆರೆಯಾಗಿದೆ.
ಈ ಹಿಂದೆ ಚಿನ್ನಿಕಟ್ಟಿ ಬಳಿ ಚಿರತೆಯ ಹೆಜ್ಜೆ ಗುರುತು ಪತ್ತೆ ಮಾಡಲಾಗಿತ್ತು. ಬಳಿಕ ಹಿರೇಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದರಿಂದ ಅಲ್ಲಿಗೆ ಬೋನು ಸ್ಥಳಾಂತರಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅದರ ಚಲನವಲನದ ಮೇಲೆ ನಿಗಾ ಇಡಲಾಗಿತ್ತು.
ಬಳಿಕ ಒಂದೆರಡು ದಿನದಲ್ಲಿ ನೆಲ್ಲಿಕೊಪ್ಪ ಗ್ರಾಮದ ಬಳಿ ಜಿಂಕೆಯನ್ನು ಬೇಟೆಯಾಡಿರುವುದು ಪತ್ತೆಯಾಗಿತ್ತು. ತದನಂತರ ಮತ್ತೂರು ಕಡೆ ಕಾಣಿಸಿಕೊಂಡಿತ್ತು. 15 ದಿನಗಳ ಹಿಂದೆ ಚಿನ್ನಿಕಟ್ಟಿ ಬಳಿ ಮೇಕೆಯನ್ನು ಬೇಟೆಯಾಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಅಲ್ಲಿರುವುದು ಖಚಿತವಾಗಿತ್ತು. ಅದನ್ನು ಜೀವಂತ ಸೆರೆಹಿಡಿಯಲು ಮತ್ತೆ ಬೋನನ್ನು ಚಿನ್ನಿಕಟ್ಟಿ ಗ್ರಾಮದ ಬಳಿ ಸ್ಥಳಾಂತರಿಸಲಾಗಿತ್ತು.
ಸೋಮವಾರ ಬೆಳಿಗ್ಗೆ ಬೋನು ಮುಚ್ಚಿರುವುದನ್ನು ಗಮನಿಸಿದ ರೈತರು ಚಿರತೆ ಸೆರೆಯಾಗಿರುವುದನ್ನು ಖಚಿತಪಡಿಸಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಚಿರತೆಯನ್ನು ದಾಂಡೇಲಿಯ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಮಾಹಿತಿ ನೀಡಿದರು.
ಚಿರತೆ ಬೋನಿನಲ್ಲಿ ಸೆರೆಯಾಗಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜನರು ಸಮೀಪದಲ್ಲಿಯೇ ಚಿರತೆಯನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.