ಶಂಕರ ಕೊಪ್ಪದ
ಹಿರೇಕೆರೂರು: ಅಧಿಕ ಮಾಸದ ನಿಮಿತ್ತ ತಾಲ್ಲೂಕಿನ ಸಾತೇನಹಳ್ಳಿಯ ಶಾಂತೇಶ ಸ್ವಾಮಿ (ಮಾರುತಿ) ದೇವರ ದರ್ಶನಕ್ಕೆ ಮೂರನೇ ಶನಿವಾರ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದು ಬಂದಿತ್ತು.
ಅಧಿಕ ಮಾಸದಲ್ಲಿ ಸಾತೇನಹಳ್ಳಿ ಗ್ರಾಮದ ಶಾಂತೇಶ (ಮಾರುತಿ), ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಆಂಜನೇಯ (ಕಾಂತೇಶ), ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ) ಈ ಮೂವರ ದೇವರ ದರ್ಶನವನ್ನು ಅಧಿಕ ಮಾಸದ ಶನಿವಾರ ಸೂರ್ಯೋದಯದಿಂದ ಸೂರ್ಯಸ್ತದೊಳಗೆ ಒಂದೇ ದಿನ ದರ್ಶನ ಪಡೆದರೆ ಕಾಶಿಯಾತ್ರೆ ಮಾಡಿದ ಫಲ ಪ್ರಾಪ್ತಿಯಾಗುತ್ತದೆ ಎಂಬ ಪುರಾಣೋಕ್ತಿಯಿದೆ.
ಕದರಮಂಡಲಗಿ ಆಂಜನೇಯನ ಮುಖ ನೇರವಾಗಿದ್ದು, ಮುಖದ ಮೇಲಿನ ಹೊಳಪು ಮತ್ತು ಕಾಂತಿ ದಿಗ್ಭ್ರಮೆಗೊಳಿಸುವಂತಿದೆ. ಶಿಲಾಮೂರ್ತಿಯ ಕಣ್ಣುಗಳು ‘ಸೂರ್ಯಸಾಲಿಗ್ರಾಮ’ದಿಂದ ನಿರ್ಮಾಣವಾಗಿದೆ. ವಿಗ್ರಹದ ಕಣ್ಣುಗಳಿಂದ ಸದಾ ಕಾಂತಿ ಹೊರ ಹೊಮ್ಮುತ್ತದೆ. ಆದ್ದರಿಂದ ಈತನನ್ನು‘ಕಾಂತೇಶ’ ಎಂದು ಸಂಭೋಧಿಸಲಾಗುತ್ತದೆ.
ಸಾತೇನಹಳ್ಳಿ ಗ್ರಾಮದ ಶಾಂತೇಶ ಸ್ವಾಮಿ ಹಲವು ಪವಾಡ ಮಾಡುತ್ತ ಬಂದಿದ್ದು, ವಿಜಯ ದಶಮಿ ಮಹೋತ್ಸವದಂದು ಮಕ್ಕಳ ಫಲ ಬೇಡಿ ಬಂದ ದಂಪತಿಗೆ ಮಕ್ಕಳ ಫಲ ನೀಡುತ್ತಾನೆ ಎಂಬುದು ಜನರ ನಂಬಿಕೆ.
ಪಕ್ಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ (ಆಂಜನೇಯ) ಸ್ವಾಮಿಯ ದರ್ಶನ ಪಡೆಯುಲು ಭಕ್ತ ಸಮೂಹ ತುದಿಗಾಲ ಮೇಲೆ ನಿಂತಿರುತ್ತದೆ. ಕಾಂತೇಶನ ಕಣ್ಣಲ್ಲಿ, ಭ್ರಾಂತೇಶನ ನೆತ್ತಿಯಲ್ಲಿ ಮತ್ತು ಶಾಂತೇಶನ ಪಾದದಲ್ಲಿ ಅತಿ ಶ್ರೇಷ್ಠವಾದ ಸಾಲಿಗ್ರಾಮ ಸ್ಥಾಪಿಸಲಾಗಿದ್ದು, ಒಂದೇ ದಿನ ಈ ಮೂವರು ದೇವರ ದರ್ಶನ ಪಡೆದರೆ ಇಷ್ಟಾರ್ಥ ಈಡೇರುತ್ತದೆ ಎಂಬ ಪ್ರತೀತಿಯೂ ಇದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ದರ್ಶನ ಪಡೆದರು. ಭಕ್ತರ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಗ್ರಾಮದ ಹೊರವಲಯದಲ್ಲಿ ವಾಹನ ನಿಲ್ಲಿಸಿಲು ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು. ಕದರಮಂಡಲಗಿ ಆಂಜನೇಯನ ದರ್ಶನ ಪಡೆದು, ಹಂಸಭಾವಿ ಕಡೆಯಿಂದ ಬರುವ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವುದನ್ನು ತಪ್ಪಿಸಿ, ಉತ್ತಮ ವ್ಯವಸ್ಥೆಯನ್ನು ಹಂಸಭಾವಿ ಪೊಲೀಸರು ಕಲ್ಪಿಸಿದ್ದರು.
ಮೊದಲು ಶಿಕಾರಿಪುರದ ಭ್ರಾಂತೇಶ ಸ್ವಾಮಿ ನೋಡಬೇಕು ನಂತರ ಹಾವೇರಿ ಜಿಲ್ಲೆಯ ಕದರಮಂಡಲಗಿ ಗ್ರಾಮದ ಕಾಂತೇಶ ನಂತರ ಸಾತೇನಹಳ್ಳಿಯ ಶಾಂತೇಶ ಸ್ವಾಮಿ ಈ ಮೂವರ ದೇವರ ದರ್ಶನವನ್ನು ಅಧಿಕ ಮಾಸದಲ್ಲಿ ಸೂರ್ಯೋದಯದಿಂದ ಸೂರ್ಯಸ್ತದೊಳಗೆ ಒಂದೇ ದಿನ ದರ್ಶನ ಪಡೆದರೆ ಕಾಶಿಯಾತ್ರೆ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಅಧಿಕ ಮಾಸದಲ್ಲಿ ಏನೇ ಕೆಲಸ ಮಾಡಿದರೂ ಫಲ ಜಾಸ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ದೇವಸ್ಥಾನದ ಅರ್ಚಕರಾದ ಬದರಿ ನಾರಾಯಣ ಆಚಾರ್ಯ ಸಂಜೀವ್ ಆಚಾರ್ಯ ‘ಪ್ರಜಾವಾಣೆ’ಗೆ ಹೇಳಿದರು.
ಈ ಮೂರು ಊರಿನ ಹನುಮನರನ್ನು ಸೂರ್ಯೋದಯದಿಂದ ಸೂರ್ಯಾಸ್ತ ಆಗುವುದೊರಳಗೆ ದರ್ಶನ ಪಡೆದುಕೊಳ್ಳುವುದು ವಿಶೇಷವಾಗಿದೆ. ಸಾಡೇಸಾತಿ, ಅಷ್ಟಮ, ಅರ್ಧಾಷ್ಟಮ, ಪಂಚಮ ಶನಿಕಾಟದಲ್ಲಿರುವವರು ತಪ್ಪಿಸದೇ ಇಲ್ಲಿಗೆ ಬರುತ್ತಾರೆ. ಈ ಮೂರು ಕ್ಷೇತ್ರಗಳು ಅಷ್ಟೊಂದು ಮಹತ್ವವಾದ ಮಹಿಮೆಯ ಸ್ಥಳಗಳಾಗಿವೆ. ಅಲ್ಲದೆ ಸಾತೇನಹಳ್ಳಿ ಗ್ರಾಮದಲ್ಲಿ
ಪ್ರತಿ ವರ್ಷ ಶ್ರವಣ ನಕ್ಷತ್ರದ ವಿಜಯದಶಮಿ ದಿನದಂದು ಮಕ್ಕಳ ಫಲದ ಔಷಧ ಹಾಗೂ ಆಶೀರ್ವಾದ ಕಾಯಿ ವಿತರಣಾ ಕಾರ್ಯಕ್ರಮ ಜರುಗುತ್ತದೆ.
ಯಾವುದೇ ಜಾತಿ ಧರ್ಮಗಳ ಭೇದ ಭಾವ ಇಲ್ಲದೇ ರಾಜ್ಯ ಹೊರ ರಾಜ್ಯಗಳಿಂದ ಇಲ್ಲಿಗೆ ಬರುತ್ತಾರೆ.ಗೀತಾ ನರೇಗಲ್ ಭಕ್ತ ಗದಗ ಜಿಲ್ಲೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.