ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಅವರದು ಜಾತಿ ರಾಜಕಾರಣ, ನಮ್ಮದು ನೀತಿ ರಾಜಕಾರಣ: ಡಿಕೆ ಶಿವಕುಮಾರ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ
Last Updated 21 ಅಕ್ಟೋಬರ್ 2021, 13:56 IST
ಅಕ್ಷರ ಗಾತ್ರ

ಹಾವೇರಿ: ‘ಬಿಜೆಪಿಯವರು ಚುನಾವಣಾ ಪ್ರಚಾರವನ್ನು ಅಡ್ಡದಾರಿಗೆ ತೆಗೆದುಕೊಂಡು ಹೋಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಜಾತಿ ರಾಜಕಾರಣ’ ಮಾಡುತ್ತಿದ್ದಾರೆ. ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಹಾನಗಲ್‌ ತಾಲ್ಲೂಕಿನ ಹೊಂಕಣ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ವೈಯಕ್ತಿಕ ನಿಂದನೆ ಮೇಲೆ ನನಗೆ ವಿಶ್ವಾಸವಿಲ್ಲ. ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಅವರ ಮೇಲೆ ನನಗೆ ಗೌರವವಿದೆ. ವಿಧಾನಸೌಧದಲ್ಲಿ ಯುದ್ಧ ಮಾಡುವ ಸನ್ನಿವೇಶ ಬರುತ್ತದೆ, ಅಲ್ಲಿ ಮಾಡೋಣ ಎಂದು ಇತರ ಪಕ್ಷಗಳ ವೈಯಕ್ತಿಕ ಟೀಕೆಗಳಿಗೆ ನಯವಾಗಿಯೇ ತಿರುಗೇಟು ನೀಡಿದರು.

ಸರ್ಕಾರ ಏಕಿರಬೇಕು?:ಮಕ್ಕಳಿಗೆ ಅ.25ರಿಂದ ಶಾಲೆ ಆರಂಭ ಮಾಡಲಾಗುತ್ತಿದ್ದು, ಬಿಸಿಯೂಟ ನೀಡಲು ಸಿದ್ಧತೆ ಆಗಿಲ್ಲ ಎಂದು ಹೇಳಿದ್ದಾರೆ. ಮಕ್ಕಳಿಗೆ ಊಟ ಕೊಡಲು ಆಗದಿದ್ದರೆ ಈ ಸರ್ಕಾರ ಯಾಕಿರಬೇಕು? ಅಂಗನವಾಡಿ ಆರಂಭ ಇಂದಿರಾ ಗಾಂಧಿ ಅವರ ಕಾರ್ಯಕ್ರಮ, ಬಿಸಿಯೂಟ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆ ಎಂದರು.

ನನ್ನ ಫೋಟೊ ಬಳಸಿಕೊಂಡುಕಾಂಗ್ರೆಸ್ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಹುಚ್ಚು ಆಸ್ಪತ್ರೆಗೆ ಸೇರಲಿ, ಉಚಿತ ಚಿಕಿತ್ಸೆ ಕೊಡಿಸುತ್ತೇವೆ ಎಂದು ರಾಜುಗೌಡ ಹೇಳಿದ್ದಾರೆ. ಅವರು ಬೆಡ್‌ ರೆಡಿ ಮಾಡಿಸಲಿ, ನಾನು ಹೋಗಿ ಅಡ್ಮಿಟ್‌ ಆಗುತ್ತೇನೆ ಎಂದು ತಿರುಗೇಟು ನೀಡಿದರು.

ಚೀಲದಲ್ಲಿ ಹಣ ತಂದ ಮಂತ್ರಿಗಳು:ಹಾನಗಲ್‌ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ಐದಾರು ಜನ ಮಂತ್ರಿಗಳು ಚೀಲದಲ್ಲಿ ಹಣ ಹೊತ್ತುಕೊಂಡು ಬಂದಿದ್ದಾರೆ. ಅವರು ಎಷ್ಟು ಹಣ ಕೊಟ್ಟರೂ ಬೇಡ ಎನ್ನಬೇಡಿ. ಮಸ್ಕಿಯಲ್ಲಿ ಜನ ಬಿಜೆಪಿ ನೋಟು, ಕಾಂಗ್ರೆಸ್‌ಗೆ ವೋಟು ಎಂದು ಹೇಳಿದ್ದರು. ನೀವು ಕಾಂಗ್ರೆಸ್‌ಗೆ ಮತ ಹಾಕಿ. ಮಾನೆ ನಿಮ್ಮ ಸೇವಕನಂತೆ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT