ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಭಾನುವಾರ ಮತದಾನ ಬಿರುಸಿನಿಂದ ನಡೆಯುತ್ತಿದೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಏಲಕ್ಕಿ ಕಂಪಿನ ನಗರಿ ಹಾವೇರಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಮಾರುತಿ ಶಿಡ್ಲಾಪುರ, ಪ್ರಭುಲಿಂಗಪ್ಪ ಹಲಗೇರಿ ಹಾಗೂ ಈಡಿಗರ ವೆಂಕಟೇಶ ಸೇರಿದಂತೆ ಒಟ್ಟು ನಾಲ್ವರು ಕಣದಲ್ಲಿದ್ದು, ಅಭ್ಯರ್ಥಿಗಳ ಭವಿಷ್ಯ ಇಂದು ಬಹಿರಂಗವಾಗಲಿದೆ.
ಬೆಳಿಗ್ಗೆ 8ರಿಂದ ಮತದಾನ ಆರಂಭಗೊಂಡಿದ್ದು, ಸಂಜೆ 4ರವರೆಗೆ ನಡೆಯಲಿದೆ. ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 8,499 ಮತದಾರರಿದ್ದಾರೆ.
ಹಾವೇರಿ, ರಾಣೆಬೆನ್ನೂರಿನಲ್ಲಿ ತಲಾ 3 ಮತಗಟ್ಟೆ, ಹಾನಗಲ್ನಲ್ಲಿ 2 ಹಾಗೂ ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ಶಿಗ್ಗಾವಿ ಹಾಗೂ ಸವಣೂರಿನಲ್ಲಿ ತಲಾ 1 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಫಲಿತಾಂಶ ಇಂದು ‘ಮತದಾನ ಕಾರ್ಯ ಮುಕ್ತಾಯದ ನಂತರ ಇಂದೇ (ನ.21ರಂದು) ‘ಮತ ಎಣಿಕೆ’ ಕಾರ್ಯವು ಕೂಡಾ ಜರುಗಲಿದೆ.
ಜಿಲ್ಲೆಯ ಎಲ್ಲ ತಾಲ್ಲೂಕಿನ ಮತದಾನದ ಅಂಕಿ ಅಂಶಗಳನ್ನು ಕ್ರೋಡೀಕರಿಸಿ, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಲಾಗುವುದು. ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗಾಗಿ ಮತದಾನದ ವಿವರಗಳನ್ನು ಬೆಂಗಳೂರು ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು’ ಎಂದು ಚುನಾವಣಾಧಿಕಾರಿಯಾದ ಹಾವೇರಿ ತಾಲ್ಲೂಕು ತಹಶೀಲ್ದಾರ್ ಗಿರೀಶ ಸ್ವಾದಿ "ಪ್ರಜಾವಾಣಿ" ಗೆ ತಿಳಿಸಿದ್ದಾರೆ.