ಹಾವೇರಿ: ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ಕುಮಾರ ಮೀನಾ ಅವರು ಜಿಲ್ಲೆಯ ವಿವಿಧ ನೆರೆ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ, ಮನೆ ನಿರ್ಮಾಣ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು.
ಗುರುವಾರ ಶಿಗ್ಗಾವಿ ಹಾಗೂ ಸವಣೂರು, ಹುರಳಿಕೊಪ್ಪಿ, ಕುರುಬರಮಲ್ಲೂರು, ಕುಣಿಮೆಳ್ಳಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಅಧಿಕಾರಿಗಳು ಹಾಗೂ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.
ಮಳೆ ಮತ್ತು ನೆರೆಯಿಂದ ಕುಸಿದಿರುವ ಮನೆಗಳನ್ನು ಪುನರ್ ನಿರ್ಮಾಣ ಕುರಿತಂತೆ ಈಗಾಗಲೇ ನೀಡಿರುವ ಮುಖ್ಯಮಂತ್ರಿ ಅವರ ಕಾರ್ಯಾದೇಶ ಪತ್ರಗಳು ಸಂತ್ರಸ್ತರಿಗೆ ತಲುಪಿವೆಯೇ? ಇಲ್ಲವೇ?, ವಸತಿ ನಿರ್ಮಾಣಕ್ಕೆ ಸಂದಾಯವಾಗಿರುವ ಪರಿಹಾರ ಹಣ ಸಿಕ್ಕಿದೆಯೇ? ಎಂಬ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು. ಪರಿಹಾರ ಹಣ ಜಮೆಯಾಗಿರುವ ಕುರಿತಂತೆ ಸಂತ್ರಸ್ತರ ಬ್ಯಾಂಕ್ ಪಾಸ್ ಪುಸ್ತಕ ಪರಿಶೀಲಿಸಿದರು.
ಫಲಾನುಭವಿಗಳಿಗೆ ತಕ್ಷಣವೇ ಮನೆ ನಿರ್ಮಾಣ ಆರಂಭಮಾಡಿ, ಈಗಾಗಲೇ ನಿಮಗೆ ಮೊದಲ ಕಂತು ಹಣ ಜಮೆಯಾಗಿದೆ. ಎರಡನೇ ಕಂತಿನ ಹಣ ಬಿಡುಗಡೆಗೆ ಇಂದಿನಿಂದಲೇ ಜಿ.ಪಿ.ಎಸ್. ಮಾಡಿ ದಾಖಲೆಗಳನ್ನು ನಿಗಮದ ವೆಬ್ಸೈಟ್ಗೆ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರಿಂದ ಎರಡನೇ ಕಂತಿನ ಬಿಡುಗಡೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತಾ ವ್ಯವಸ್ಥೆ ಕುರಿತಂತೆ ಪರಿಶೀಲಿಸಿದರು. ಕುರಬರಮಲ್ಲಾಪೂರದ ಶುದ್ಧ ನೀರಿನ ಘಟಕ್ಕೆ ಭೇಟಿ ನೀಡಿ ನಳದ ನೀರನ್ನು ಕುಡಿದು ಗುಣಮಟ್ಟ ತಿಳಿದುಕೊಂಡರು. ಹುರಳಿಕೊಪ್ಪ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ತಿಪ್ಪೆಗಳ ಸ್ಥಳಾಂತರ ಹಾಗೂ ಕಸದ ಸಂಸ್ಕರಣೆ ಕುರಿತಂತೆ ಜನರಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಗ್ರಾಮಗಳ ಜನರೊಂದಿಗೆ ಮಾತನಾಡಿ, ಕುಡಿಯುವ ನೀರಿನ ಮಿತ ಬಳಕೆ ಹಾಗೂ ಗ್ರಾಮದ ಸ್ವಚ್ಛತೆ ಕುರಿತಂತೆ ಗ್ರಾಮಸ್ಥರು ಜವಾಬ್ದಾರಿ ತೆಗೆದುಕೊಳ್ಳಬೇಕು, ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಶುದ್ಧ ವಾತಾವರಣ, ಶುದ್ಧ ನೀರು, ಶುದ್ಧ ಪರಿಸರದ ಬಗ್ಗೆ ಜನರು ಕಾಳಜಿ ಹೊಂದಬೇಕು ಎಂದು ಜನರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಸವಣೂರು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿ.ಪಂ.ಸಹಾಯಕ ಕಾರ್ಯದರ್ಶಿ ಜಾಫರ್ ಸುತಾರ್, ಶಿಗ್ಗಾವಿ ಹಾಗೂ ಸವಣೂರ ತಹಶೀಲ್ದಾರ್, ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.