ಹಾವೇರಿ: ‘ಪುಸ್ತಕ ಓದುವ ಅಭಿರುಚಿಯು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಮತ್ತು ಜ್ಞಾನವನ್ನು ಹುಟ್ಟು ಹಾಕುತ್ತದೆ’ ಎಂದು ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಗ್ರಂಥಪಾಲಕ ಡಾ.ಆತ್ಮಾನಂದ ಹೊಳೆಯಣ್ಣನವರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಡಾ.ಎಸ್.ಆರ್. ರಂಗನಾಥನ್ ಅವರ 130ನೇ ಜನ್ಮ ದಿನಾಚರಣೆಯ ಪ್ರಯುಕ್ತ ಈಚೆಗೆ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಎಸ್.ಆರ್. ರಂಗನಾಥನ್ಅವರು ಭಾರತೀಯ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ನೀಡಿದಷ್ಟೇ ಅಲ್ಲದೇ ಗ್ರಂಥಾಲಯಗಳಲ್ಲಿ ಅಳವಡಿಸಿಕೊಳ್ಳಬೇಕಾದ ಪಂಚ ಸೂತ್ರಗಳನ್ನು ರೂಪಿಸುವ ಮೂಲಕ ಭಾರತೀಯ ಗ್ರಂಥಾಲಯಗಳ ಪಿತಾಮಹ ಎನಿಸಿದ್ದಾರೆ ಎಂದರು.
ಕ.ವಿ.ವಿ. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ.ಪ್ರಶಾಂತ ಎಚ್.ವೈ. ಮಾತನಾಡಿ, ಗ್ರಂಥಾಲಯಗಳು ಶೈಕ್ಷಣಿಕ ಸಂಸ್ಥೆಗಳ ಗರ್ಭಗುಡಿಯಿದ್ದಂತೆ, ಪ್ರತಿಯೊಬ್ಬ ವಿದ್ಯಾರ್ಥಿ ಕೂಡಾ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕಗಳ ಸಾಂಗತ್ಯ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯತ್ತದೆ ಎಂದರು.
ಅತಿಥಿ ಸಹಾಯಕ ಗ್ರಂಥಪಾಲಕ ಪ್ರಕಾಶ ಮುಕಮ್ಮನವರ ನಿರೂಪಿಸಿದರು. ಅನಿತಾ ಹಾಲಮತ, ಡಾ.ಚಿದಾನಂದ ಕಮ್ಮಾರ್, ಪ್ರೊ.ನೀಲಕಂಠ ಗುಡಗೂರ, ಕಚೇರಿ ಅಧೀಕ್ಷಕ ಮಲ್ಲಿಕಾರ್ಜುನ ಚಿಕ್ಕುಂಬಿ ಇದ್ದರು. ಪ್ರೊ.ನೂರುಲ್ಲಾ ಖಾದ್ರಿ ಮುತವಳ್ಳಿ ಸ್ವಾಗತಿಸಿದರು. ಡಾ.ಕವಿತಾ ನಾಯ್ಕ ವಂದಿಸಿದರು.