ಹಾವೇರಿ: ಕೋವಿಡ್ ನಿಯಂತ್ರಿಸಲು ಲಸಿಕೆಯೊಂದೇ ಪರಿಣಾಮಕಾರಿ ಅಸ್ತ್ರವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ನಿತ್ಯ ಕನಿಷ್ಠ 10 ಸಾವಿರ ಮಂದಿಗೆ ಲಸಿಕೆ ಹಾಕಬೇಕು. ಲಭ್ಯ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಹಾಗೂ ಅತಿವೃಷ್ಟಿ ಸ್ಥಿತಿಗತಿಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಲಸಿಕೆಯನ್ನು ಪೂರ್ಣವಾಗಿ ಬಳಸಿದರೆ ಮಾತ್ರ ಹೆಚ್ಚುವರಿ ಲಸಿಕೆಯನ್ನು ಪೂರೈಸಲಾಗುತ್ತದೆ. ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ಲಸಿಕೆ ಹಾಕಿಸಿಕೊಳ್ಳುವ ಅರ್ಹರಿಗೆ ಎಸ್.ಎಂ.ಎಸ್ ಕಳುಹಿಸಬೇಕು ಎಂದು ಹೇಳಿದರು.
ಮೂರನೇ ಅಲೆ ಬರುವ ಮುನ್ನ ಅಂದರೆ, ಜುಲೈ 30ರೊಳಗಾಗಿ ಪ್ರತಿ ಗ್ರಾಮಗಳಲ್ಲೂ ‘ಮಕ್ಕಳ ಆರೋಗ್ಯ ಶಿಬಿರ’ ನಡೆಸಬೇಕು. ಅಪೌಷ್ಟಿಕತೆ ಅಥವಾ ಗಂಭೀರ ಕಾಯಿಲೆಗಳು ಕಂಡುಬಂದರೆ ತಜ್ಞವೈದ್ಯರಿಂದ ವಿಶೇಷ ಚಿಕಿತ್ಸೆ ಕೊಡಿಸಬೇಕು. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ಗಳು, ಕ್ಷೀರಭಾಗ್ಯ ಯೋಜನೆಯ ಸೌಲಭ್ಯ ಕಲ್ಪಿಸಬೇಕು ಎಂದರು.
ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಹಾಗೂ ಶಿಕ್ಷಕರಿಗೆ ಲಸಿಕೆ ಹಾಕಲು ಆದ್ಯತೆ ನೀಡಬೇಕು.ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಿಕೆಗೆ ಕಾಲೇಜು ಕ್ಯಾಂಪಸ್ನಲ್ಲಿ ಉಪ ಕೇಂದ್ರಗಳನ್ನು ತೆರೆದು ಲಸಿಕೆ ನೀಡಬೇಕು ಎಂದು ಸೂಚನೆ ನೀಡಿದರು.
ಆಗಸ್ಟ್ 30ರೊಳಗಾಗಿ ಜಿಲ್ಲೆಯಲ್ಲಿ ‘ಆಕ್ಸಿಜನ್ ಜನರೇಟರ್’ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿ ಸೇರಿದಂತೆ ರಾಜ್ಯ ವಿಪತ್ತು ನಿರ್ವಹಣಾ ಅನುದಾನದಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
‘ಮಕ್ಕಳಿಗೆ ಪ್ರತ್ಯೇಕ ಹಾಸಿಗೆ ಮೀಸಲಿಡಿ’
ಮಕ್ಕಳನ್ನು ಕೋವಿಡ್ನಿಂದ ರಕ್ಷಣೆ ಮಾಡುವ ನಿಟ್ಟಿನಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ 30 ಹಾಸಿಗೆ ಹಾಗೂ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಕನಿಷ್ಠ 10 ಹಾಸಿಗೆಗಳ ಐಸಿಯು ಸಹಿತ ಮಕ್ಕಳ ವಿಶೇಷ ಕೋವಿಡ್ ವಾರ್ಡ್ಗಳನ್ನು ತೆರೆಯಬೇಕು.
ಅಗತ್ಯ ಔಷಧ ದಾಸ್ತಾನುಗಳನ್ನು ಮಾಡಿಕೊಳ್ಳಬೇಕು. ಕೋವಿಡ್ ಪಾಸಿಟಿವ್ ಪ್ರಮಾಣ ಕಡಿಮೆಯಾಗಿರುವ ಕಾರಣ ಮುಚ್ಚಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಕಾಯ್ದಿರಿಸಬೇಕು. ಅಗತ್ಯಬಿದ್ದರೆ ಮಕ್ಕಳೊಂದಿಗೆ ಪಾಲಕರು ಉಳಿದುಕೊಳ್ಳಲು ಆರೈಕೆ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದರು.
‘21 ಸೋಂಕಿತರ ಜೀವ ಉಳಿಸಿ’
ಜಿಲ್ಲಾ ಆಸ್ಪತ್ರೆಯಲ್ಲಿ 21 ಜನ ಕೋವಿಡ್ ರೋಗಿಗಳು ವೆಂಟಿಲೇಟರ್ ಮೇಲೆ ಇದ್ದಾರೆ. ಇವರ ಜೀವ ಉಳಿಸುವ ನಿಟ್ಟಿನಲ್ಲಿ ತೀವ್ರ ನಿಗಾವಹಿಸಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಇತರ ಜಿಲ್ಲೆಗಳಲ್ಲಿ ‘ಮರಣ ಪ್ರಮಾಣ’ ಇಳಿಕೆಯಾಗಿದ್ದರೂ, ಹಾವೇರಿ ಜಿಲ್ಲೆಯಲ್ಲಿ ಮಾತ್ರ ಏಕೆ ಮರಣ ಪ್ರಮಾಣ ತಗ್ಗಿಲ್ಲ. ರೋಗಿಗಳ ಬಳಿ ವೈದ್ಯರು ಹೋಗುತ್ತಿಲ್ಲ. ವಾರ್ಡ್ ಬಾಯ್ ಮತ್ತು ನರ್ಸ್ಗಳಿಂದ ಚಿಕಿತ್ಸೆ ಮತ್ತು ಆರೈಕೆ ಮಾಡಿಸುತ್ತಿದ್ದೀರಾ ಎಂಬ ದೂರುಗಳು ಬಂದಿವೆ. ಪಿಪಿಇ ಕಿಟ್ ಧರಿಸಿ, ರೋಗಿಗಳಿಗೆ ಚಿಕಿತ್ಸೆ ಕೊಡಲು ಇರುವ ಸಮಸ್ಯೆಯಾದರೂ ಏನು ಎಂದು ತರಾಟೆಗೆ ತೆಗೆದುಕೊಂಡರು.
ಈಗ 48 ವೆಂಟಿಲೇಟರ್ ಲಭ್ಯವಿದ್ದು, ಸರ್ಕಾರ ಹಾಗೂ ದಾನಿಗಳಿಂದ ಪಡೆದು ಮೂರನೇ ಅಲೆಯ ಮುನ್ನ ಆಗಸ್ಟ್ ಅಂತ್ಯದೊಳಗೆ 100 ವೆಂಟಿಲೇಟರ್ ಪಡೆಯುವ ಗುರಿ ಹೊಂದಲಾಗಿದೆ ಎಂದರು.
ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.