ಕುಮಾರಪಟ್ಟಣ: ರಾಣೆಬೆನ್ನೂರು ತಾಲ್ಲೂಕಿನ ಐರಾವತ ಕ್ಷೇತ್ರ ಐರಣಿ ಗ್ರಾಮದ ತುಂಗಭದ್ರಾ ನದಿ ತೀರದ ಬೆಟ್ಟದ ಮೇಲಿರುವ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ರಥೋತ್ಸವ ಹುಣ್ಣಿಮೆಯಂದು ಗುರುವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಸಂತಶ್ರೇಷ್ಠ ಕರ್ಕಿಹಳ್ಳಿಮಠ (ಕನವಳ್ಳಿ) ಸುರೇಶ ಪಾಟೀಲ ಇವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಹೋಮ, ಹವನ, ಪೂಜಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ವೆಂಕಟೇಶ್ವರ ಸ್ವಾಮಿಯ ರಥೋತ್ಸವ ಜರುಗಿತು.
ಭಕ್ತರಿಗೆ ಕೋಸಂಬರಿ, ಬೆಲ್ಲದ ಪಾನಕ ವಿತರಿಸಿದ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.
ಐರಣಿ ಲಕ್ಷ್ಮೀವೆಂಕಟೇಶ್ವರ ಪಂಚ ದೇವಸ್ಥಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ರಾಣೆಬೆನ್ನೂರು, ಹರಿಹರ, ಐರಣಿ ಮತ್ತು ಬೇರೆಡೆಯಿಂದ ಬಂದ ಭಕ್ತರು ಪಾಲ್ಗೊಂಡಿದ್ದರು.