ವಿಜಯಪುರ: ಹನಿಟ್ರ್ಯಾಪ್ ಮೂಲಕ ಚಿನ್ನಾಭರಣ ಮಳಿಗೆ ಮಾಲೀಕನಿಂದ ₹15 ಲಕ್ಷ ಹಣ ದೋಚಿದ್ದ ಒಬ್ಬರು ಮಹಿಳೆ ಸೇರಿದಂತೆ ಐದು ಮಂದಿ ಆರೋಪಿಗಳನ್ನು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ದಾನಮ್ಮ ಮಹಾಂತೇಶ ಹಿರೇಮಠ, ಸುಧೀರ ವಿವೇಕಾನಂದ ಘಟ್ಟನ್ನೆವರ, ಬಬಲೇಶ್ವರ ಪಟ್ಟಣದ ರವಿ ಸಿದ್ರಾಯ ಕಾರಜೋಳ, ಬೊಮ್ಮನಳ್ಳಿಯ ಮಲ್ಲಿಕಾರ್ಜುನ ಚನ್ನಪ್ಪ ಮುರಗುಂಡಿ ಹಾಗೂ ಸಿಂದಗಿಯ ಶ್ರೀಕಾಂತ ಸೋಮಜಾಳ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಸ್ಕೂಟರ್, ಎಂಟು ಮೊಬೈಲ್ ಮತ್ತು ಒಂದು ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ.
‘ನಗರದ ಚಿನ್ನಾಭರಣ ವ್ಯಾಪಾರಿಯ ಮಳಿಗೆಗೆ ದಾನಮ್ಮ ಗ್ರಾಹಕರ ಸೋಗಿನಲ್ಲಿ ಉಂಗುರ ಮಾಡಿಸಿಕೊಳ್ಳಲು ಬಂದಿದ್ದರು. ಇದಾದ ಕೆಲ ದಿನಗಳ ಬಳಿಕ ಉಂಗುರದಲ್ಲಿದ್ದ ಹರಳನ್ನು ಬದಲಾಯಿಸಿಕೊಡುವಂತೆ ವ್ಯಾಪಾರಿಯನ್ನು ಕೇಳಿದ್ದರು. ಆಗ ವ್ಯಾಪಾರಿ ದಾನಮ್ಮ ಅವರ ಮನೆಗೆ ಹೋಗಿದ್ದರು. ಆ ವೇಳೆ 4–5 ಜನರನ್ನು ಕರೆಸಿದ ದಾನಮ್ಮ ವ್ಯಾಪಾರಿಯನ್ನು ಹೊಡೆಸಿದ್ದಾರೆ. ಅಲ್ಲದೆ, ಅವರ ಬಳಿ ಇದ್ದ 6 ಗ್ರಾಂ ತೂಕದ ಚಿನ್ನದ ಉಂಗುರ, ₹9 ಸಾವಿರ ನಗದು, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಕಿತ್ತುಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಇದಾದ ಬಳಿಕ ಅವರನ್ನು ಮನೆಯಲ್ಲೇ ಕೂಡಿಹಾಕಿ, ಅವರನ್ನು ಬಿಟ್ಟು ಕಳುಹಿಸಲು ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೇ ಅಲ್ಲ, ಅವರನ್ನು ಬೆದರಿಸಿ, ಅವರ ಮನೆಯವರಿಂದ ₹15 ಲಕ್ಷ ನಗದು ತರಿಸಿಕೊಂಡಿದ್ದಾರೆ. ಇದಾದ ಬಳಿಕ ಉಳಿಕೆ ₹10 ಲಕ್ಷ ಕೊಡುವಂತೆ ನಿತ್ಯ ಕಿರುಕುಳ ಕೊಡುತ್ತಿದ್ದರು. ಇದರಿಂದ ನೊಂದ ವ್ಯಾಪಾರಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು’ ಎಂದು ಮಾಹಿತಿ ನೀಡಿದರು.
‘ಚಿನ್ನದ ವ್ಯಾಪಾರಿಯು ಹೋಂ ಡೆಲಿವರಿ ಸರ್ವಿಸ್ ಕೊಡುತ್ತಿದ್ದರು. ಹೀಗಾಗಿ, ಮಹಿಳೆ ಕರೆದಾಗ ಅವರ ಮನೆಗೆ ಹೋಗಿದ್ದಾರೆ. ಇದರಲ್ಲಿ ಅವರ ತಪ್ಪಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿತ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿವೈಎಸ್ಪಿ ಲಕ್ಷ್ಮಿನಾರಾಯಣ, ಇನ್ಸ್ಪೆಕ್ಟರ್ ಎಂ.ಕೆ.ದ್ಯಾಮಣ್ಣವರ, ಸಬ್ ಇನ್ಸ್ಪೆಕ್ಟರ್ ಆನಂದ ಠಕ್ಕನ್ನವರ, ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ಬಿ.ಐ.ಹಿರೇಮಠ, ಜಿ.ಬಿ.ಬಿರಾದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.