ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಪಂಪ್‌ಸೆಟ್‌ ಕಳವು; ಮೂವರ ಬಂಧನ

Last Updated 4 ಅಕ್ಟೋಬರ್ 2020, 3:15 IST
ಅಕ್ಷರ ಗಾತ್ರ

ಕಲಬುರ್ಗಿ: ರೈತರು ಹೊಲಗಳಲ್ಲಿ ನೀರಾವರಿಗಾಗಿ ಅಳವಡಿಸಿದ್ದ ಪಂಪ್‌ಸೆಟ್‌ ಕಳವು ಮಾಡಿದ ಮೂವರು ಆರೋಪಿಗಳನ್ನು ಮಹಾಗಾಂವ್‌ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇವರಿಂದ ₹ 3 ಲಕ್ಷ ಮೌಲ್ಯದ 18 ಕೃಷಿ ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಲಬುರ್ಗಿ ನಗರದ ಖಲೀಲ್‌ ಅಹಮದ್ ಜಲೀಲ್‌ ಅಹಮದ್‌, ಖಾಜಾ ಗುಲಾಮ್‌ನಬಿ, ಮಹಮದ್‌ ಹಾರುನ್‌ಸಾಬ್‌ ಮಹಿಬೈಬ್‌ಸಾಬ್‌ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ ಒಂದು ವಾಹನ, ಮೊಬೈಲ್‌ಗಳನ್ನು ಜಪ್ತು ಮಾಡಲಾಗಿದೆ. ಇನ್ನೊಬ್ಬ ಆರೋಪಿ ಜಾವೇದ್‌ ಯೂಸೂಫ್‌ ಪರಾರಿಯಾಗಿದ್ದಾನೆ.

ಸೂಕ್ತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಮಹಾಗಾಂವ ಸಮೀಪದ ಬೇಲೂರ ಪಾಟಿಯಲ್ಲಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದರು.

ಕೊಲೆ ಸಾಬೀತು: ಜೀವಾವಧಿ ಶಿಕ್ಷೆ

ಕಲಬುರ್ಗಿ: ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ನಾಗರಾಜ ಮಡಿವಾಳ ಎಂಬಾತನಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.

2017ರಲ್ಲಿ ಕೊಲೆಗೀಡಾದ ಮಹೇಶನು ತನ್ನ ಪತ್ನಿ ಶಶಿಕಲಾ ಅವರೊಂದಿಗೆ ಜಗಳ ತೆಗೆದು ಸಾರಾಯಿ ಕುಡಿಯಲು ದುಡ್ಡು ಕೇಳುತ್ತಿದ್ದ. ಪತಿ– ಪತ್ನಿ ಮಧ್ಯದ ಜಗಳ ಬಿಡಿಸಲು ನಾಗರಾಜ ಮಧ್ಯೆ ಬಂದರು.

ಇದರಿಂದ ಸಿಟ್ಟಿಗೆದ್ದ ಮಹೇಶ ಅವರು ನಾಗರಾಜ ಹಾಗೂ ತನ್ನ ಪತ್ನಿ ಮಧ್ಯೆ ಅನೈತಿಕ ಸಂಬಂಧಿವಿದೆ ಎಂದು ಶಂಕಿಸಿ ಬೈದಾಡಿದರು. ಇದರಿಂದ ಕೋಪಗೊಂಡ ನಾಗರಾಜ ಮಹೇಶ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದರು. ತೀವ್ರ ಗಾಯಗೊಂಡ ಮಹೇಶ, ಕೆಲ ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು.

ಬ್ರಹ್ಮಪುರ ಇನ್‌ಸ್ಪೆಕ್ಟರ್‌ ಎಸ್‌.ಎಂ. ಯಾಳಗಿ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಸುಖಲಾಕ್ಷ ಪಾಲನ್‌ ಅವರು ತೀರ್ಪು ನೀಡಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ: 10 ವರ್ಷ ಜೈಲು, ದಂಡ

ಕಲಬುರ್ಗಿ: ಬಾಲಕಿಯೊಬ್ಬಳನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ್ದರಿಂದ ಗುಂಡಗರ್ತಿ ಗ್ರಾಮದ ವೀರೇಶ ಎಂಬಾತನಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ.

ವಾಹನ ಚಾಲಕನಾಗಿದ್ದ ವೀರೇಶ ಅಪ್ರಾಪ್ತಳನ್ನು ಪುಸಲಾಯಿಸಿ, ಮನೆಯಿಂದ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ನಂತರ 2018ರಲ್ಲಿ ಬಾಲಕಿ ತನ್ನ ಸಂಬಂಧಿಕರ ಮನೆಯಲ್ಲಿದ್ದಾಗ ಮತ್ತೆ ಬೈಕ್‌ ಮೇಲೆ ಅಪಹರಣ ಮಾಡಿ, ಅತ್ಯಾಚಾರ ಎಸಗಿದ್ದ.

ಬಾಲಕಿಯು ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಪಡೆದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಕಲಬುರ್ಗಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಗ ಪಿಎಸ್‌ಐ ಆಗಿದ್ದ ವಿಜಯಲಕ್ಷ್ಮಿ ಅವರು ತನಿಖೆ ಮಾಡಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಗೋಪಾಲಪ್ಪ ಎಸ್‌. ಅವರು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಎಲ್‌.ವಿ. ಚಟ್ನಾಳಕರ್‌ ವಾದ ಮಂಡಿಸಿದ್ದರು.

ಸರ್ಕಾರದ‍ಪರವಾಗಿ 1ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಎಸ್‌.ಆರ್. ನರಸಿಂಹಲು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT