ಕಲಬುರಗಿ: ‘ಕಾನ್ಸಿರಾಂ ದೇಶದ ಬಹುದೊಡ್ಡ ನಾಯಕ, ಬಹುಜನ ಹಿತಚಿಂತಕ’ ಎಂದು ಅಣದೂರ್ ಬುದ್ಧ ವಿಹಾರದ ಭಂತೆ ವರಜ್ಯೋತಿ ಹೇಳಿದರು.
ನಗರದ ಶಹಾಬಾದ್ ರಿಂಗ್ ರಸ್ತೆಯ ಕೋಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಹುಜನ ಮತದಾರರ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾನ್ಸಿರಾಂ ಅವರ 90ನೇ ಜನ್ಮದಿನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಹುಜನರ ದೇಶ ಭಾರತ. ಆದರೆ ಅಖಂಡತೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿವೆ. ಹೀಗಾಗಿ ಬಹುಜನರು ಒಂದಾಗಬೇಕು. ಶಾಂತಿಯುತ ಭಾರತ ಕಟ್ಟಬೇಕು. ಕಾನ್ಸಿರಾಂ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ವಕೀಲ ಸಜ್ಜನ ಮಲ್ಲೇಶಿ ಮಾತನಾಡಿ, ‘ವೇದಶಾಸ್ತ್ರಗಳ ಕಾನೂನು ಜಾರಿಗೆ ತರುವ ಹುನ್ನಾರ ನಡೆಯುತ್ತಿದೆ. ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಮತದಾರ ಆಮಿಷಕ್ಕೆ ಒಳಗಾಗದೇ ಲೋಕಸಭಾ ಚುನಾವಣೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು’ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಧರ್ಮಣ್ಣ ಜೈನಾಪೂರ, ‘ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು ಅನ್ನೋದನ್ನು ಅಂಬೇಡ್ಕರ್ ಹೇಳಿದ್ದಾರೆ. ಅಂಬೇಡ್ಕರ್ ನಮ್ಮ ಮೇಲೆ ವಿಶ್ವಾಸವಿಟ್ಟು ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ನಾವು ಸೂಕ್ತ ರೀತಿಯಲ್ಲಿ ಚಲಾಯಿಸಬೇಕು’ ಎಂದರು.
ಬಹುಜನ ಮತದಾರರ ವೇದಿಕೆ ರಾಜ್ಯಾಧ್ಯಕ್ಷ ಶರಣಬಸಪ್ಪ ಸೂಗುರ್ ಅಧ್ಯಕ್ಷತೆ ವಹಿಸಿದ್ದರು. ಬಿ.ವಿ.ಎಫ್ ರಾಜ್ಯ ಉಪಾಧ್ಯಕ್ಷ ಮಹೆಮೂದ್ ಷಾ, ಶರಣು ಎಸ್. ಹಂಗರಗಿ, ಕೇದಾರನಾಥ ಹರಸೂರಕರ್, ಜ್ಯೋತಿ ಕಾಂಬಳೆ, ಸುನೀತಾ ಕೆಲ್ಲೂರ್, ಮಾಯಾ ಸೂಗುರ, ಪಾರ್ವತಿ ದೊಡ್ಡಮನಿ ಸೇರಿದಂತೆ ಹಲವರು ಹಾಜರಿದ್ದರು.