ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಂತ್ರ ಹೂಡಿ ಅಧಿಕಾರ ಪಡೆದ ಬಿಜೆಪಿ

27 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾದರೂ ಅಧಿಕಾರ ಪಡೆಯದ ದೌರ್ಭಾಗ್ಯ; ಆಸಕ್ತಿ ವಹಿಸದ ಕಾಂಗ್ರೆಸ್ ಮುಖಂಡರು
Last Updated 24 ಮಾರ್ಚ್ 2023, 5:58 IST
ಅಕ್ಷರ ಗಾತ್ರ

ಕಲಬುರಗಿ: ಒಂದೂವರೆ ವರ್ಷ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 55 ಪೈಕಿ 27 ಸ್ಥಾನಗಳನ್ನು ಪಡೆದರೂ ಕಾಂಗ್ರೆಸ್ ಪಕ್ಷವು ಅಧಿಕಾರದ ಸಮೀಪ ಬಂದು ಮುಗ್ಗರಿಸಿದೆ.

23 ಸ್ಥಾನಗಳನ್ನು ಪಡೆದು, ಅದರಲ್ಲಿ ಒಬ್ಬ ಸದಸ್ಯೆ ಅನರ್ಹರಾಗಿ, ಪಕ್ಷಕ್ಕೆ ಸೇರ್ಪಡೆಯಾಗಿದ್ದ ಪಕ್ಷೇತರ ಸದಸ್ಯರೊಬ್ಬರಿಗೆ ಮತದಾನದ ಹಕ್ಕು ಸಿಗದಿದ್ದರೂ ಮೇಯರ್, ಉಪ ಮೇಯರ್ ಪಟ್ಟವನ್ನು ಪಡೆದ ಬಿಜೆಪಿ ಗೆಲುವಿನ ನಗೆ ಬೀರಿದೆ. ಆರಂಭದಲ್ಲೇ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಅಧಿಕಾರ ಅನುಭವಿಸಬಹುದಾಗಿದ್ದ ಜೆಡಿಎಸ್ ತನ್ನದೇ ತಪ್ಪಿಗೆ ಪರಿತಪಿಸುವಂತಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲ, ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಅವರಂತಹ ಅನುಭವಿ ರಾಜಕಾರಣಿಗಳಿದ್ದರೂ ಕಲಬುರಗಿಯಲ್ಲಿ ಸುಲಭವಾಗಿ ಸಿಗಬಹುದಾಗಿದ್ದ ಅಧಿಕಾರವನ್ನು ಸ್ವಲ್ಪದರಲ್ಲೇ ಕೈತಪ್ಪಿದ್ದು ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದಂತಾಗಿದೆ.

‘ಪಾಲಿಕೆ ಚುನಾವಣೆ ನಡೆದ ಹೊಸದರಲ್ಲಿ ತೋರಿಸಿದ ಉತ್ಸಾಹವನ್ನು ಈಗ ತೋರಿಸದೇ ಇರುವುದೇ ಕಾಂಗ್ರೆಸ್‌ಗೆ ಅಧಿಕಾರ ತಪ್ಪಲು ಕಾರಣ ಎನ್ನುವ ವಿಶ್ಲೇಷಣೆ ನಡೆದಿವೆ. ಚುನಾವಣೆ ಘೋಷಣೆಯಾದರೂ ಪಕ್ಷದಿಂದ ರಣತಂತ್ರ ರೂಪಿಸುವ ಯಾವುದೇ ಪ್ರಯತ್ನ ಕಾಂಗ್ರೆಸ್ ಮುಖಂಡರಿಂದ ನಡೆದಿಲ್ಲ. ಮೊದಲು ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ ಅವರು ಜೆಡಿಎಸ್‌ ಮುಖಂಡರು ಹಾಗೂ ಪಾಲಿಕೆ ಸದಸ್ಯರೊಂದಿಗೆ ಸಂಪರ್ಕ ಸಾಧಿಸಿ ಬೆಂಬಲ ಪಡೆಯಲು ಪ್ರಯತ್ನಿಸಿದ್ದರು. ಈಚಿನ ಕೆಲ ದಿನಗಳಿಂದ ಆಸಕ್ತಿ ವಹಿಸಿರಲಿಲ್ಲ. ಪ್ರಿಯಾಂಕ್ ಖರ್ಗೆ ಅವರೂ ಹೆಚ್ಚು ಗಮನ ಹರಿಸಿಲ್ಲ’ ಎಂದು ಜೆಡಿಎಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿಯವರು ತಮ್ಮ ಸದಸ್ಯರನ್ನು ಒಂದೆಡೆ ಸೇರಿಸಿಕೊಂಡು ನಿರಂತರ ಸಭೆಗಳನ್ನು ನಡೆಸಿದರು. ನಮ್ಮಲ್ಲಿ ಕನಿಷ್ಠ ಒಂದು ಸಭೆ ಮಾಡಿಲ್ಲ. ಮೇಯರ್, ಉಪ ಮೇಯರ್ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬೇಕು ಎಂಬುದೂ ಗುರುವಾರ ಬೆಳಿಗ್ಗೆಯಷ್ಟೇ ನಿರ್ಧಾರವಾಯಿತು. ಚುನಾವಣೆ ಇಷ್ಟೊಂದು ಸುಲಭವಾಗಿ ತೆಗೆದುಕೊಂಡರೆ ಹೇಗೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಮೇಯರ್–ಉಪ ಮೇಯರ್ ಚುನಾವಣೆಯಲ್ಲಿ ಭಾಗವಹಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಗೆಲುವಿನ ಸಾಧ್ಯತೆ ಇದ್ದರೆ ಮಾತ್ರ ಬರುವುದಾಗಿ ಹೇಳಿದ್ದರು’ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಂಕಷ್ಟದಲ್ಲಿದ್ದ ಬಿಜೆಪಿ: ಮೇಯರ್–ಉಪ ಮೇಯರ್ ಚುನಾವಣೆ ಎದುರಿಸುವ ಹಿಂದಿನ ದಿನದವರೆಗೂ ಬಿಜೆಪಿ ಸಂಕಷ್ಟದಲ್ಲಿತ್ತು. ಮತ ಹಾಕಲೆಂದೇ ಕಸರತ್ತು ನಡೆಸಿ, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಬೇರೆ ಜಿಲ್ಲೆಗಳ ವಿಧಾನಪರಿಷತ್‌ ಸದಸ್ಯರ ಹೆಸರುಗಳನ್ನು ಸೇರಿಸಿತ್ತಾದರೂ ಜೆಡಿಎಸ್‌ನ ಬೆಂಬಲವನ್ನು ಎದುರು ನೋಡುತ್ತಿತ್ತು.

ಹೈಕಮಾಂಡ್ ಮಟ್ಟದಲ್ಲಿ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲು ಸೂಚಿಸಿದ್ದರೆ ಸುಲಭ ಗೆಲುವು ಸಾಧ್ಯವಾಗುತ್ತಿತ್ತು. ಆದರೆ, ಉಪ ಮೇಯರ್ ಪಟ್ಟ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿದ್ದರಿಂದ ಕಾಂಗ್ರೆಸ್ ಬೆಂಬಲಿಸಲು ಮುಂದಾಯಿತು. ಹೀಗಾಗಿ, ಬಿಜೆಪಿಗೆ ಬೆಂಬಲ ಸಿಗಲಿಲ್ಲ.

ಅನುಗಾಲಕ್ಕೆಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿಕೊಂಡಿದ್ದ ವಿಧಾನಪರಿಷತ್ ಸದಸ್ಯ ಅಥಣಿಯ ಲಕ್ಷ್ಮಣ ಸವದಿ ಅವರು ಮತದಾನದಿಂದ ದೂರವುಳಿದರು. ಮತ್ತೊಂದೆಡೆ ಪಕ್ಷದಿಂದ ಆಯ್ಕೆಯಾಗಿದ್ದ ಪಾಲಿಕೆ ಸದಸ್ಯೆ ಪ್ರಿಯಾಂಕಾ ಬೋಯಿ ಅವರ ಸದಸ್ಯತ್ವವನ್ನು ಜಿಲ್ಲಾ ನ್ಯಾಯಾಲಯ ಅನರ್ಹಗೊಳಿಸಿದ್ದರಿಂದ ಅವರ ಮತವೂ ಬರಲಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿ ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದ ಶಂಭುಲಿಂಗ ಬಳಬಟ್ಟಿ ಅವರ ಆಸ್ತಿ ವಿವರ ಸಲ್ಲಿಕೆಯ ಕುರಿತಾದ ಪ್ರಕರಣದಲ್ಲಿ ನ್ಯಾಯಾಲಯವು ಮತ ಹಾಕದಂತೆ ನಿರ್ಬಂಧ ವಿಧಿಸಿದ್ದರಿಂದ ಅವರ ಮತವೂ ಬಿಜೆಪಿಗೆ ದಕ್ಕಲಿಲ್ಲ.

ಇಷ್ಟೆಲ್ಲ ಸವಾಲುಗಳ ಮಧ್ಯೆಯೂ ಬಿಜೆಪಿ ಗೆಲುವನ್ನು ಸಾಧಿಸಿತು. ಜೆಡಿಎಸ್ ಸದಸ್ಯ ಅಲೀಮುದ್ದೀನ್ ಪಟೇಲ್ ಚುನಾವಣೆಯಲ್ಲಿ ಮತದಾನ ಮಾಡದೇ ರಹಸ್ಯ ಸ್ಥಳದಲ್ಲಿದ್ದರು. ಅವರು ಗೈರಾಗಿದ್ದರಿಂದ ಬಿಜೆಪಿ 33 ಸ್ಥಾನಗಳನ್ನು ಪಡೆದು ಅಧಿಕಾರ ಸ್ಥಾಪಿಸಿತು.

ಮತದಾನ ಮಾಡಿ ನಿರ್ಗಮಿಸಿದ ಸಿರೋಯಾ

ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದಲೇತಮ್ಮ ಹೆಸರನ್ನು ನಗರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಂಡಿದ್ದ ರಾಜ್ಯಸಭೆ ಸದಸ್ಯ ಲಹರ್‌ಸಿಂಗ್ ಸಿರೋಯಾ ಅವರು ಮತದಾನ ಮಾಡಿದ ಬಳಿಕ ತರಾತುರಿಯಲ್ಲಿ ವಿಮಾನ ಹತ್ತಲು ಅಲ್ಲಿಂದ ನಿರ್ಗಮಿಸಿದರು. ಅವರ ಜೊತೆಗೆ ಸಂಸದ ಡಾ. ಉಮೇಶ ಜಾಧವ ಅವರೂ ತೆರಳಿದರು.

ಅಧಿಕೃತ ಘೋಷಣೆಗೂ ಮುನ್ನವೇ ಪಟಾಕಿ ಸಿಡಿತ

ಮಹಾನಗರ ಪಾಲಿಕೆಯ ಮೇಯರ್ ಆಗಿ ವಿಶಾಲ ದರ್ಗಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸುವುದಕ್ಕೆ ಮುನ್ನವೇ ಅನ್ನಪೂರ್ಣ ಕ್ರಾಸ್ ಬಳಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಅವರನ್ನು ಅಲ್ಲಿಂದ ದೂರ ಕಳುಹಿಸಿದರು.

ಜೆಡಿಎಸ್–ಬಿಜೆಪಿ ಮುಖಂಡರ ವಾಗ್ವಾದ

144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರು ಸೇರಿದ್ದಕ್ಕೆ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲ ಹೊತ್ತು ಕೃಷ್ಣಾರೆಡ್ಡಿ, ಬಿಜೆಪಿಯ ಶ್ರೀನಿವಾಸ ದೇಸಾಯಿ, ಮಹಾದೇವ ಬೆಳಮಗಿ ಅವ ಮಧ್ಯೆ ವಾಗ್ವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT