ಕಸಾಪ ಮಹಿಳೆಗೆ ಅವಕಾಶ ನೀಡಲು ಮನವಿ: ಲೇಖಕಿ ಬಿ.ಟಿ.ಲಲಿತಾ ನಾಯಕ್ ಮನವಿ

ಕಲಬುರಗಿ: ‘ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿರುವ ಏಕೈಕ ಮಹಿಳಾ ಅಭ್ಯರ್ಥಿ ಸರಸ್ವತಿ ಚಿಮ್ಮಲಗಿ ಅವರನ್ನು ಬೆಂಬಲಿಸಬೇಕು’ ಎಂದು ಲೇಖಕಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಪರಿಷತ್ತಿಗೆ ಬೇಕಾಗಿರುವುದು ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು. ಕನ್ನಡದ ಬಗ್ಗೆ ಆಸಕ್ತಿ ಇರುವಂತಹ ಮೇರು ವ್ಯಕ್ತಿತ್ವವನ್ನು ಸರಸ್ವತಿ ಚಿಮ್ಮಲಗಿ ಅವರಲ್ಲಿ ಕಾಣಬಹುದು. ಚಿಮ್ಮಲಗಿ ಅವರು ಸಾಹಿತಿ ಮಾತ್ರವಲ್ಲದೇ ರಂಗಭೂಮಿ ಕಲಾವಿದೆಯೂ ಹೌದು’ ಎಂದರು.
‘ಇಂಥ ಕಲಾವಿದರು, ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾದರೆ ಕನ್ನಡವನ್ನ ಮನ, ಮನೆಗೆ ತಲುಪಿಸಲು ಸಹಕಾರವಾಗುತ್ತದೆ’ ಎಂದು ತಿಳಿಸಿದರು.
‘30ಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಸರಸ್ವತಿ ಚಿಮ್ಮಲಗಿ ಅವರನ್ನು ಬೆಂಬಲಿಸುವುದರ ಜತೆಗೆ ಸಾಹಿತ್ಯ ಪರಿಷತ್ಗೆ ಮೊದಲ ಬಾರಿಗೆ ಸ್ತ್ರೀಯರಿಗೆ ಮಹತ್ವ ನೀಡಬೇಕು. ಕನ್ನಡದ ಬಾವುಟವನ್ನು ಮಹಿಳೆಯರಿಗೂ ಎತ್ತಿ ಹಿಡಿಯಲು ನಾಡಿನ ಜನರು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ಅಭ್ಯರ್ಥಿ ಡಾ. ಸರಸ್ವತಿ ಚಿಮ್ಮಲಗಿ, ಸಾಹಿತಿಗಳಾದ ಸಂಧ್ಯಾ ಹೊನಗುಂಟಿಕರ್, ಚಂದ್ರಕಲಾ, ಜ್ಯೋತಿ ಬಾದಾಮಿ, ವೈಶಾಲಿ ದೇಶಪಾಂಡೆ ಹಾಗೂ ಅಶೋಕ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.