ಕಲಬುರ್ಗಿ: ‘ಜಿಮ್ಸ್ನಲ್ಲಿ ತುರ್ತು ಚಿಕಿತ್ಸಾ ವಿಭಾಗಕ್ಕೆ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ನೀಡಿ ಚಾಲನೆ ಕೊಡಲಾಗಿದೆ. ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಪ್ರಾಣ ಕಾಪಾಡಲು ಈ ವಿಭಾಗ ಸಹಕಾರಿಯಾಗಲಿದೆ’ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.
ಇಲ್ಲಿನ ಜಿಮ್ಸ್ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಆರಂಭಿಸಲಾಗಿರುವ ಹೈಟೆಕ್ ಯಂತ್ರೋಪಕರಣಗಳನ್ನು ಹೊಂದಿರುವ, 24 ಹಾಸಿಗೆಗಳುಳ್ಳ ಹೊರ ರೋಗಿಗಳ ತುರ್ತು ಚಿಕಿತ್ಸಾ ವಿಭಾಗವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಈವರೆಗೆ ಹಳೆಯ ಕಟ್ಟಡದಲ್ಲಿದ್ದ ಈ ವಿಭಾಗವನ್ನು ಪೂರ್ಣ ಪ್ರಮಾಣದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ತುರ್ತು ಚಿಕಿತ್ಸೆ ಬೇಕಾದ ರೋಗಿಗಳಿಗೆ ಅನುವು ಮಾಡಲಾಗಿದೆ. ಆಧುನಿಕ ವೈದ್ಯಕೀಯ ಸವಲತ್ತುಗಳು ಇಲ್ಲಿದ್ದು, ಸಾರ್ವಜನಿಕರು ಬಳಕೆ ಮಾಡಿಕೊಳ್ಳಬೇಕು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಹೇಳಿದರು.
ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರು ಘಟಕದ ಕಾರ್ಯ ನಿರ್ವಹಣೆ ಬಗ್ಗೆ ವಿವರಿಸಿದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ನಾಲ್ಕು ಬೆಡ್ಗಳಿರುವ ಟ್ರೈಯೇಜ್ ಏರಿಯಾ, 8 ಎಚ್ಡಿಯು ಬೆಡ್ ಸೇರಿದಂತೆ 24 ಬೆಡ್ಗಳಿರುವ ಘಟಕ ಇದಾಗಿದೆ. ಅಪಘಾತ, ಹೃದಯಾಘಾತ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಆಸ್ಪತ್ರೆಗೆ ಬರುತ್ತಲೇ ಟ್ರಯೇಜ್ ಏರಿಯಾದಲ್ಲಿ ಮೊದಲು ಪ್ರಾಥಮಿಕ ಚಿಕಿತ್ಸೆ ನೀಡಿ ರೋಗಿ ಸ್ಥಿರಗೊಂಡ ನಂತರ ರೋಗಕ್ಕೆ ಸಂಬಂಧಿಸಿದ ಪರಿಣತ ವೈದ್ಯರಿರುವ ವಾರ್ಡ್ಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಫಿಯುದ್ದೀನ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಇಎನ್ಟಿ ವಿಭಾಗದ ಮುಖ್ಯಸ್ಥೆ ಡಾ.ರೇಣುಕಾ ಸತೀಶ, ಸರ್ಜನ್ ಡಿ.ಎಸ್.ಸಜ್ಜನ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಗುರುರಾಜ ದೇಶಪಾಂಡೆ, ಆಡಳಿತ ವಿಭಾಗದ ಮುಖ್ಯಸ್ಥ ಈರಣ್ಣ ಇದ್ದರು.