ಚಿತ್ತಾಪುರ: ಇಲ್ಲಿನ ಅಬಕಾರಿ ಇಲಾಖೆಯ ಉಪ ವಿಭಾಗದ ಅಧಿಕಾರಿಗಳು ತಾಲ್ಲೂಕಿನ ವಾಡಿ ಪಟ್ಟಣದ ಬಲರಾಮ್ ಚೌಕ್ ಹತ್ತಿರ ಹಾಗೂ ಶಹಾಬಾದ್ ಎಬಿಎಲ್ ಕ್ರಾಸ್ ಹತ್ತಿರ ಸೋಮವಾರ, ಪ್ರತ್ಯೇಕ ದಾಳಿ ಮಾಡಿ ಮದ್ಯ ಮತ್ತು ಎರಡು ಬೈಕ್ ಜಪ್ತಿ ಮಾಡಿದ್ದಾರೆ.
ಅಕ್ರಮ ಮದ್ಯ ಸಾಗಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಅಧಿಕಾರಿ, ಸಿಬ್ಬಂದಿ ಮದ್ಯ ಸಾಗಾಟ ಮಾಡುತ್ತಿದ್ದ ಎರಡು ಬೈಕ್, ಮೂರು ಬಾಕ್ಸ್ 26 ಲೀಟರ್ ಸ್ವದೇಶಿ ಮದ್ಯ, ಎರಡು ಬಾಕ್ಸ್ 15 ಲೀಟರ್ ಬಿಯರ್ ಜಪ್ತಿ ಮಾಡಿದ್ದಾರೆ. ದಾಳಿ ಸಮಯದಲ್ಲಿ ಬೈಕ್ ಸವಾರರು ಪರಾರಿಯಾಗಿದ್ದಾರೆ.
ಅಬಕಾರಿ ವಲಯ ನಿರೀಕ್ಷಕ ರಮೇಶ ಬಿರಾದಾರ, ಅಬಕಾರಿ ನಿರೀಕ್ಷಕ ಧನರಾಜ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಬ್ಬಂದಿ ಶಿವಾನಂದ, ಶರಣಬಸಪ್ಪ, ಮಹಾಂತೇಶ, ನಾಗರಾಜ, ಸುಭಾಷ, ಭಾಷಾಸಾಬ್, ಮಲ್ಲು ಅವರು ಭಾಗವಹಿಸಿದ್ದಾರೆ. ಚಿತ್ತಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.