ಕಲಬುರಗಿ: ಬೇಸಿಗೆ ಆರಂಭಕ್ಕೂ ಮುನ್ನವೇ ಸೂರ್ಯ ನಿಗಿ ನಿಗಿ ಬೆಂಕಿ ಕಾರುತ್ತಿದ್ದಾನೆ. ಬರದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದೆ. ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ತೆರೆದ ಬಾವಿ, ಕೆರೆಗಳಲ್ಲಿನ ನೀರು ಬತ್ತುತ್ತಿದೆ. ಜಿಲ್ಲೆಯ ಜೀವ ನದಿ ಭೀಮೆಯ ಒಡಲೂ ಬರಿದಾಗಿದೆ. ನಗರವೂ ಸೇರಿ ನೂರಾರು ಹಳ್ಳಿಗರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಬರದ ಛಾಯೆ ಆವರಿಸಿಕೊಳ್ಳುವ ಕಲಬುರಗಿಯು ಬರಪೀಡಿತ ಹಣೆಪಟ್ಟಿ ಅಂಟಿಸಿಕೊಂಡಿದೆ. ಕೆರೆ–ಕಟ್ಟೆಗಳಲ್ಲಿ ನೀರಿಲ್ಲದೆ ಮುಂದೆ ಭೀಕರ ಜಲಕ್ಷಾಮ ಸಂಭವಿಸುತ್ತದೆಯೋ ಎಂಬ ಭೀತಿ ಜನರನ್ನು ಕಾಡುತ್ತಿದೆ. ಮತ್ತೊಂದು ಕಡೆ ಕೊಳವೆ ಬಾವಿ ಕೊರೆದರೂ ನಿರೀಕ್ಷಿತ ಮಟ್ಟದಲ್ಲಿ ನೀರು ಬರುತ್ತಿಲ್ಲ. 3–4 ಇಂಚು ನೀರು ಜಿನುಗಿದರೂ 8–9 ದಿನಗಳಲ್ಲಿ ಏಕಾಏಕಿ ಸ್ಥಗಿತ ಆಗುತ್ತಿರುವುದು ಅಧಿಕಾರಿಗಳನ್ನೂ ಆತಂಕಕ್ಕೆ ತಳ್ಳಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕುಡಿಯುವ ನೀರು ಎದುರಿಸುವ ಸಂಭವನೀಯ 282 ಗ್ರಾಮಗಳ ಪಟ್ಟಿ ಮಾಡಿದೆ. ಮೂರು ತಿಂಗಳ ಹಿಂದೆಯಷ್ಟೇ 193 ಗ್ರಾಮಗಳಿದ್ದವು. ಈಗ 89 ಗ್ರಾಮಗಳು ಸೇರ್ಪಡೆಯಾಗಿವೆ. ಮಾರ್ಚ್ ಅಂತ್ಯದ ಬಳಿಕ ಇನ್ನಷ್ಟು ಹಳ್ಳಿಗಳು ಈ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಅಫಜಲಪುರದಲ್ಲಿ 86, ಆಳಂದ ಮತ್ತು ಕಲಬುರಗಿ ಗ್ರಾಮೀಣದಲ್ಲಿ 45, ಚಿಂಚೋಳಿಯಲ್ಲಿ 15, ಚಿತ್ತಾಪುರದಲ್ಲಿ 14, ಕಲಬುರಗಿಯಲ್ಲಿ 40, ಜೇವರ್ಗಿಯಲ್ಲಿ 5, ಸೇಡಂನಲ್ಲಿ 28, ಕಾಳಗಿಯಲ್ಲಿ 17, ಕಮಲಾಪುರದಲ್ಲಿ 23, ಯಡ್ರಾಮಿಯಲ್ಲಿ 4 ಹಾಗೂ ಶಹಾಬಾದ್ನಲ್ಲಿ 5 ಗ್ರಾಮಗಳು ಸೇರಿ ಒಟ್ಟು 282 ಸಂಭವನೀಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರಲಿದೆ ಎಂದು ಗುರುತಿಸಲಾಗಿದೆ.
ಸದ್ಯ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಒದಗಿಸಲಾಗುತ್ತಿದೆ. ಕೊಳವೆ ಬಾವಿಗಳ ದುರಸ್ತಿ ಮಾಡಿದ್ದೇವೆ. ಉಳಿದ ಕಡೆ ನೀರಿಗೆ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಮೇಲ್ನೋಟಕ್ಕೆ ಹೇಳಿಕೊಳ್ಳುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸಲು ತಯಾರಿ ನಡೆಸುತ್ತಿದ್ದಾರೆ.
‘ಅಫಜಲಪುರ, ಆಳಂದ ಹಾಗೂ ಕಲಬುರಗಿ ತಾಲ್ಲೂಕುಗಳಲ್ಲಿ ಕೊರೆದ ಅರ್ಧದಷ್ಟು ಕೊಳವೆ ಬಾವಿಗಳಲ್ಲಿ ನೀರೇ ಬಂದಿಲ್ಲ. ಕೆಲವು ಕಡೆ ನೀರು ಬಿದ್ದ ವಾರದಲ್ಲೇ ಅವು ಬತ್ತಿ ಹೋಗಿವೆ. ಪ್ರತಿ ಬಾರಿ ಬರಗಾಲ ಬಂದಾಗ ಅಂತರ್ಜಲ ಮಟ್ಟ ನಮ್ಮ ನಿಯಂತ್ರಣ ಸಿಗದಷ್ಟು ಆಳಕ್ಕೆ ಕುಸಿಯುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.
ಭೀಮಾ ಒಡಲು ಬರಿದಾಗಿದೆ. ಅಮರ್ಜಾ, ಕಾಗಿಣಾ ಮತ್ತು ಮುಲ್ಲಾ ಮಾರಿ ನದಿಗಳಲ್ಲಿ ಸಹ ನೀರಿನ ಪ್ರಮಾಣ ತಗ್ಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಒತ್ತುವರಿ ಮತ್ತು ಹುಳು ತುಂಬಿದ್ದರಿಂದ ಕೆರೆಗಳ ನೀರಿನ ಸಂಗ್ರಹವೂ ಕುಸಿದಿದೆ. ಜಲಮೂಲ ಇಲ್ಲದೆ ಪರ್ಯಾಯ ವ್ಯವಸ್ಥೆ ಮಾಡುವುದು ಹೇಗೆ ಎಂಬ ಯಕ್ಷ ಪ್ರಶ್ನೆ ಅಧಿಕಾರಿಗಳನ್ನೂ ಕಾಡುತ್ತಿದೆ.
ಪೂರಕ ಮಾಹಿತಿ: ಸಂಜಯ ಪಾಟೀಲ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಎಂ.ಎಚ್, ವೆಂಕಟೇಶ ಹರವಾಳ, ಶಿವಾನಂದ ಹಸರಗುಂಡಗಿ
ಜಲ ಮೂಲಗಳಿಂದ ಕೊಳವೆ ಮೂಲಕ ತೀರ ಅಗತ್ಯ ಇದ್ದಲ್ಲಿ ವಾಹನಗಳ ಮುಖೇನ ನೀರು ಸರಬರಾಜು ಮಾಡಲಾಗುವುದು. 151 ಕೊಳವೆ ಬಾವಿಗಳನ್ನು ಪತ್ತೆ ಹಚ್ಚಿ ಅವುಗಳ ದುರಸ್ತಿಗೂ ಟಾಸ್ಕ್ ಪೋರ್ಸ್ ಸಭೆಯಲ್ಲಿ ಸೂಚಿಸಲಾಗಿದೆಅಲ್ಲಮಪ್ರಭು ಪಾಟೀಲ ಕಲಬುರಗಿ ದಕ್ಷಿಣ ಶಾಸಕರು
ಆಳಂದದಲ್ಲಿ ಕೊಳವೆ ಬಾವಿ ಕೊರೆಸಿದರು ಸಮರ್ಪಕ ನೀರು ಸಿಗುತ್ತಿಲ್ಲ. ಖಾಸಗಿ ಕೊಳವೆ ಬಾವಿ ತೆರೆದ ಬಾವಿಯ ಮೂಲಕ ನೀರು ಪೂರೈಸಲಾಗುವುದುಮಾನಪ್ಪ ಕಟ್ಟಿಮನಿ ಆಳಂದ ತಾ.ಪಂ ಇಒ
ಸರ್ಕಾರ ಆಲಮಟ್ಟಿ ಜಲಾಶಯದಿಂದ ಇಂಡಿ ಕಾಲುವೆ 18ರ ಮೂಲಕ ಭೀಮಾ ನದಿಗೆ ನೀರು ಹರಿಸಿದರೆ ಜಿಲ್ಲೆಯ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗುತ್ತದೆಸಿದ್ದು ದಣ್ಣೂರ ಅಫಜಲಪುರ ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ
ಬೇಸಿಗೆಯಲ್ಲಿ ಮೂರು ದಿನಕ್ಕೊಮ್ಮೆ ನಲ್ಲಿ ನೀರು ಸರಬುರಾಜು ಮಾಡುತ್ತಾರೆ. ಕಟ್ಟಿಸಂಗಾವಿ ಸಮೀಪ ಭೀಮಾ ನದಿಯಲ್ಲಿ ನೀರು ಸಂಗ್ರಹಿಸಿಟ್ಟುಕೊಂಡರೆ ನೀರಿನ ಸಮಸ್ಯೆ ಎದುರಾಗುವುದಿಲ್ಲಭೀಮರಾಯ ಮಡಿವಾಳ ಜೇವರ್ಗಿ ನಿವಾಸಿ
ಜೇವರ್ಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕುಮರೆಪ್ಪ ಹಸನಾಪುರ ಜೇವರ್ಗಿ ನಿವಾಸಿ
ರಾಸಣಗಿ ಗ್ರಾಮದಲ್ಲಿ ಸುಮಾರು ₹ 42 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಕುಡಿಯುವ ನೀರು ಶುದ್ಧೀಕರಣ ಘಟಕ ಉಪಯೋಗಕ್ಕೆ ಬರುತ್ತಿಲ್ಲ. ಭೀಮಾ ನದಿ ನೀರು ಕಲುಷಿತವಾಗಿದ್ದು ಯಾರೂ ಉಪಯೋಗಿಸುತ್ತಿಲ್ಲಮಲ್ಲೇಶಿ ಹೊಸಮನಿ ರಾಸಣಗಿ ಗ್ರಾಮಸ್ಥ
ಚಿಂಚೋಳಿ: ಬಿಸಿಲಿನ ಬೇಗೆ ಹೆಚ್ಚಾದಂತೆ ಅಂತರ್ಜಲ ಆಳಕ್ಕೆ ಇಳಿಯುತ್ತದೆ. ಹೀಗಾಗಿ ಪ್ರಸ್ತುತ ತಾಲ್ಲೂಕಿನಲ್ಲಿ ಮಾರ್ಚ್ ಅಂತ್ಯದವರೆಗೆ ಕುಡಿಯುವ ನೀರಿನ ಗಂಭೀರ ಸಮಸ್ಯೆ ಕಂಡುಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಕೆಲವು ಕಡೆ ಖಾಸಗಿ ಕೊಳವೆ ಬಾವಿ ಮತ್ತು ತೆರೆದ ಬಾವಿ ಗುರುತಿಸಿ ಸಿದ್ಧತೆ ಕೈಗೊಳ್ಳಲಾಗಿದೆ. ಅನಿವಾರ್ಯವಾದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಏಪ್ರಿಲ್ ಬಳಿಕ ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಹುಲ್ ಕಾಂಬ್ಳೆ.
ಅಫಜಲಪುರ: ಭೀಮಾ ತೀರದ ಸುಮಾರು 50 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ– ಜಾನುವಾರು ಪರದಾಡುವಂತಾಗಿದೆ. ‘ಹಲವು ಗ್ರಾಮಗಳಲ್ಲಿ ಬೋರ್ವೆಲ್ ಕೊರೆದರೂ ನೀರು ಬರುತ್ತಿಲ್ಲ. ಕೆಲವು ಕಡೆ ನೀರು ಬಂದರು ಕೆಲವು ದಿನಗಳಲ್ಲಿ ಸ್ಥಗಿತವಾಗುತ್ತಿವೆ’ ಎಂದು ಆರ್ಡಿಡಬ್ಲ್ಯುಎಸ್ ಉಪ ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬುರ ಜ್ಯೋತಿರ್ ತಿಳಿಸಿದರು. ಭೀಮಾ ನದಿಯ ಜಾಕ್ವೆಲ್ನಲ್ಲಿ ಒಂದು ವಾರಕ್ಕೆ ಆಗುವಷ್ಟು ನೀರಿನ ಸಂಗ್ರಹವಿದೆ. ಹೀಗಾಗಿ ಪಟ್ಟಣಕ್ಕೆ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಭೀಮ ಬ್ಯಾರೇಜಿನಿಂದ ನೀರು ಬಿಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಕುಡಿಯುವ ನೀರಿಗಾಗಿ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುರಸಭೆಯ ಮುಖ್ಯ ಅಧಿಕಾರಿ ವಿಜಯ ಮಹಾಂತೇಶ್ ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.