ಗುರುವಾರ , ಮಾರ್ಚ್ 23, 2023
28 °C

ಪ್ರವಾಹ: ಮರದ ಮೇಲೆ ಕುಳಿತು ಗೋಗರೆದ ಅಧಿಕಾರಿಯ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಯಾದಗಿರಿಯಿಂದ ಬೀದರ್‌ಗೆ ಮರಳುವಾಗ ದಾರಿ ಮಧ್ಯೆ ತಾಲ್ಲೂಕಿನ ಗಣಾಪುರ ಹತ್ತಿರದ ಸೇತುವೆಯ ಬಳಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಆಗಿರುವ ಪಂಡಿತ ಬಿರಾದಾರ ಪ್ರವಾಹದಲ್ಲಿ ಸಿಲುಕಿ ರಕ್ಷಣೆಗೆ ಗೋಗರೆದ ಘಟನೆ ಬುಧವಾರ ಸಂಜೆ ನಡೆದಿದೆ. ರಾತ್ರಿ 10.45ರ ಸುಮಾರಿಗೆ ತಹಶೀಲ್ದಾರ್ ಪಂಡಿತ ಬಿರಾದಾರ ಅವರನ್ನು ‌ರಕ್ಷಣೆ ಮಾಡಲಾಯಿತು.

ಕಾರಿನಲ್ಲಿ ಬರುವಾಗ ಸೇತುವೆ ದಾಟಿದ ಅವರು ಮುಂದೆ ನೀರಿನಲ್ಲಿ ಕಾರು ಹೋಗದಿದ್ದಾಗ ಕಾರಿನಿಂದ ಇಳಿದಿದ್ದಾರೆ ಆಗ ಕಾರು ಪ್ರವಾಹದಲ್ಲಿ ಸಿಲುಕಿದೆ. ಆಗ ರಕ್ಷಣೆಗಾಗಿ ಹತ್ತಿರದ ಮರ ಹತ್ತಿದ ಅವರು ಮರದಿಂದಲೇ ರಕ್ಷಣೆಗೆ ಗೋಗರೆದಿದ್ದಾರೆ. ಮೊಬೈಲ್‌ನಲ್ಲಿ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು ‘ನಾನು ಪ್ರವಾಹದಲ್ಲಿ ಸಿಲುಕಿದ್ದೇನೆ. ಮರದ ಮೇಲಿದ್ದೇನೆ’ ಎಂದು ಹೇಳಿದ್ದಾರೆ.

ರಕ್ಷಣೆಗೆ ಧಾವಿಸಿದ ಅಧಿಕಾರಿಗಳ ತಂಡ: ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಹಾಗೂ ಡಿವೈಎಸ್ಪಿ ವೀರಭದ್ರಯ್ಯ ಮತ್ತು ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ, ಮಿರಿಯಾಣ ಠಾಣೆಯ ಸಬ್ ಇನಸ್ಪೆಕ್ಟರ್ ಸಂತೋಷ ರಾಠೋಡ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣೆಗೆ ಧಾವಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಗಣಾಪುರ ಹತ್ತಿರದ ಸೇತುವೆಯ ಬಳಿ ಜಮಾಯಿಸಿದ್ದು ರಕ್ಷಣೆಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರುಣಕುಮಾರ ಕುಲಕರ್ಣಿ ತಿಳಿಸಿದರು.

ಪಂಡಿತ ಬಿರಾದಾರ ಅವರು ಕಳೆದ ವರ್ಷ ಚಿಂಚೋಳಿಯಲ್ಲಿಯೇ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ್ದರು. ಇಲ್ಲಿಂದ ಯಾದಗಿರಿಗೆ ವರ್ಗವಾದ ಮೇಲೆ ಅವರು ಯಾದಗಿರಿಯಿಂದ ಬೀದರ್‌ಗೆ ತೆರಳುತ್ತಿದ್ದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು