ಹೊಸೂರು (ಚಿತ್ತಾಪುರ): ತಾಲ್ಲೂಕಿನ ಹೊಸೂರು ಗ್ರಾಮದ ಭೀಮಣ್ಣ ಹಣಮಂತ ಸೀಭಾ ಅವರ ಹೊಲದಲ್ಲಿ ಕಟಾವು ಮಾಡಿ ಸಂಗ್ರಹಿಸಿ ಇಟ್ಟಿದ್ದ ಕಡಲೆ ಬೆಳೆ ಸೋಮವಾರ ಸಂಜೆ ಬೆಂಕಿಗೆ ಆಹುತಿಯಾಗಿದೆ.
ಭೀಮಣ್ಣ ಅವರು ಸ್ವಂತ ಜಮೀನು 20 ಎಕರೆ ಮತ್ತು ಲೀಜ್ಗೆ ಪಡೆದ 5 ಎಕರೆ ಜಮೀನಿನಲ್ಲಿ ಕಡಲೆ ಬೆಳೆದಿದ್ದರು. ಬೆಳೆ ಕಟಾವು ಮಾಡಿ ರಾಶಿ ಮಾಡಲೆಂದು ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಆದರೆ, ಸೋಮವಾರ ಸಂಜೆ 6.30ರ ಸುಮಾರಿಗೆ ಬೆಂಕಿ ಹತ್ತಿ ಇಡೀ ಕಡಲೆ ಬೆಳೆ ಸುಟ್ಟು ಕರಕಲಾಗಿದೆ.
‘ಸುಮಾರು ₹ 5 ಲಕ್ಷ ಮೌಲ್ಯದ 110 ಚೀಲ ಕಡಲೆ ಫಸಲು ಇತ್ತು. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ನಮಗೆ ದೊಡ್ಡ ಹಾನಿಯಾಗಿದೆ’ ಎಂದು ಭೀಮಣ್ಣ ಅವರು ‘ಪ್ರಜಾವಾಣಿ’ಗೆ ತಮ್ಮ ನೋವು ತೋಡಿಕೊಂಡರು.
ಬೆಂಕಿ ಹತ್ತಿರುವ ಘಟನೆ ತಿಳಿಯುತ್ತಿದ್ದಂತೆ ಚಿತ್ತಾಪುರ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದಾಗ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಶೇ 90ರಷ್ಟು ಕಡಲೆ ಬೆಳೆ ಸುಟ್ಟು ಕರಕಲಾಗಿದೆ ಎಂದರು.
ಬೆಂಕಿ ಅವಘಡ ಸಂಭವಿಸಿದಾಗ ಕಡಲೆ ಬೆಳೆಯ ಹತ್ತಿರ ಯಾರೂ ಇರಲಿಲ್ಲ. ಹೇಗೆ ಬೆಂಕಿ ಹತ್ತಿದೆ ಎಂದು ಗೊತ್ತಾಗಿಲ್ಲ ಎಂದು ಅವರು ತಿಳಿಸಿದರು.
ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಿಪಾಲ ಮೂಲಿಮನಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.