ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಮಾನನಿಲ್ದಾಣವನ್ನು ವಾಣಿಜ್ಯ ಕಾರ್ಯಾಚರಣೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ರಾಜ್ಯ ಸರ್ಕಾರ ಶನಿವಾರ (ಆ.24) ಬೆಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ.
‘ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಸೇರಿದಂತೆ 42 ಅಂಶಗಳ ಬಗ್ಗೆ ಸ್ಪಷ್ಟೀಕರಣವನ್ನು ಪ್ರಾಧಿಕಾರವು ರಾಜ್ಯ ಸರ್ಕಾರದಿಂದ ಬಯಸಿತ್ತು. ಇದಕ್ಕೆ ಸರ್ಕಾರದ ಅಧೀನ ಸಂಸ್ಥೆಯಾದ ಕರ್ನಾಟಕ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಸಮಜಾಯಿಷಿ ನೀಡಿರುವುದರಿಂದ ಒಪ್ಪಂದ ನಡೆಯುತ್ತಿದೆ’ ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ.ಪಾಟೀಲ ತಿಳಿಸಿದರು.
‘ಉಡಾನ್ ಯೋಜನೆಯಡಿ ವಿಮಾನಗಳು ಕಲಬುರ್ಗಿ–ಬೆಂಗಳೂರು, ಕಲಬುರ್ಗಿ–ದೆಹಲಿ ಹಾಗೂ ಕಲಬುರ್ಗಿ–ತಿರುಪತಿ ಮಧ್ಯೆ ಸಂಚಾರ ಆರಂಭಿಸಲಿವೆ’ ಎಂದರು.