ಅಫಜಲಪುರ: ತಾಲ್ಲೂಕಿನ ದೇವಲಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದಲ್ಲಿ ಲಕ್ಷಾಂತರ ಯಾತ್ರಿಕರ ಮಧ್ಯೆ ಬುಧವಾರ ಗೋಪಾಲ ಕಾವಲಿ (ಮೊಸರಿನ ಗಡಿಗೆ ಒಡೆಯುವ ಕಾರ್ಯಕ್ರಮ) ಹಾಗೂ ನರಸಿಂಹ ಸರಸ್ವತಿ ಪಲ್ಲಕ್ಕಿ ಉತ್ಸವ ಜರಗಿತು.
ಗೋಪಾಲ ಕಾವಲಿ ಹಾಗೂ ನರಸಿಂಹ ಸರಸ್ವತಿ ಪಲ್ಲಕ್ಕಿ ಉತ್ಸವ ನಿಮಿತ್ತ ಬೆಳಿಗ್ಗೆ 2ಗಂಟೆಗೆ ನಿರ್ಗುಣ ಪಾದುಕೆಗಳಿಗೆ ಕೇಸರ, ಚಂದನ, ಅತ್ತರ್, ಲೇಪನದ ನಂತರ 6 ಗಂಟೆಗೆ ಮಹಾಮಂಗಳಾರತಿ 10 ಗಂಟೆ ನೈವೇದ್ಯ ಜರುಗಿತು.
ಮಧ್ಯಾಹ್ನ 12 ಗಂಟೆಗೆ ಗೋಪಾಲ ಕಾವಲಿ ಉತ್ಸವ ನಿಮಿತ್ತ ಮೊಸರು ಗಡಿಗೆ ಒಡೆಯ ಕಾರ್ಯಕ್ರಮ ಜರುಗಿತು. ಪೂಜಾರಿಗಳು ದತ್ತ ಮಹಾರಾಜರ ಘೋಷಣೆ ಕೂಗುತ್ತಾ ದೇವಸ್ಥಾನದ ಮೇಲ್ಗಡೆ ಕಟ್ಟಿದ್ದ 2 ಮೊಸರು ಗಡಿಗೆ ಒಡೆದ ನಂತರ ಆ ಮೊಸರು ದತ್ತ ಮಹಾರಾಜರ ಮಹಾತೀರ್ಥವೆಂದು ಯಾತ್ರಿಕರು ಸೇವಿಸಿದರು. ಪಲ್ಲಕ್ಕಿ ಉತ್ಸವದೊಂದಿಗೆ ಭೀಮಾನದಿಯಲ್ಲಿರುವ ರುದ್ರಪಾದ ತೀರ್ಥಕ್ಷೇತ್ರಕ್ಕೆ ಹೋಗಿ ಭಕ್ತರು ಸ್ನಾನ ಮಾಡಿದರು.
ಗೋಪಾಲ ಕಾವಲಿ ಕಾರ್ಯಕ್ರಮ ಮುಗಿದ ನಂತರ ದತ್ತ ಮಹಾರಾಜರ ಹಾಗೂ ನರಸಿಂಹ ಸರಸ್ವತಿ ಅವರ ಬೆಳ್ಳಿ ಪಾದುಕೆಗಳನ್ನು ಪಲ್ಲಕ್ಕಿಯಲ್ಲಿಟ್ಟು ಉತ್ಸವ ಜರಗಿತ್ತು. ದೇವಸ್ಥಾನದ ಅರ್ಚಕರ ಸಂಘದ ಕಾರ್ಯದರ್ಶಿ ಗಂಗಾಧರ ಶ್ರೀಕಾಂತ್ ಪೂಜಾರಿ ಮಾಹಿತಿ ನೀಡಿ, ‘ನರಸಿಂಹ ಸರಸ್ವತಿ ದತ್ತ ಮಹಾರಾಜರ ಎರಡನೇಯ ಅವತಾರ. ಅವರು ನಿರ್ಗುಣ ಪಾದುಕೆಗಳನ್ನ ದೇವಸ್ಥಾನದಲ್ಲಿಯೇ ಯಾತ್ರಿಕರ ದರ್ಶನಕ್ಕಾಗಿ ಬಿಟ್ಟು ಶ್ರೀಶೈಲದ ಕದಳಿ ವನದಲ್ಲಿ ಗುಪ್ತರಾಗುತ್ತಾರೆ. ನಂತರ ನಾನು ಪುಷ್ಪಪ್ರಸಾದ ಕಳಿಸಿಕೊಡುತ್ತೇನೆ ಎಂದು ಹೇಳಿದಾಗ ಅಂದಿನಿಂದ ಇಂದಿನವರೆಗೆ ದೇವಲಗಾಣಗಾಪುರದಲ್ಲಿ ಗೋಪಾಲ ಕಾವಲಿ ಹಾಗೂ ಪಲ್ಲಕ್ಕಿ ಉತ್ಸವ ನಡೆಯುತ್ತಿದೆ’ ಎಂದು ತಿಳಿಸಿದರು.
ದೇವಸ್ಥಾನದ ಆವರಣದಲ್ಲಿ ಕಡಿಮೆ ಸ್ಥಳವಕಾಶ ಇರುವುದರಿಂದ ಭಕ್ತರು ಹೊರಗಿನಿಂದಲೇ ಕಾರ್ಯಕ್ರಮ ವೀಕ್ಷಿಸಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ದತ್ತಾತ್ರೇಯ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಕೆಲವರು ಪಾದಯಾತ್ರೆಯ ಮೂಲಕ ದೇವಲ ಗಾಣಗಾಪುರಕ್ಕೆ ಆಗಮಿಸಿದ್ದರು. ಯಾತ್ರಿ ನಿವಾಸಗಳಲ್ಲಿ ಮೂಲಸೌಲಭ್ಯಗಳು ಇಲ್ಲದಿರುವುದರಿಂದ ಯಾತ್ರಿಕರು ಅನಿವಾರ್ಯವಾಗಿ ಖಾಸಗಿ ಲಾಡ್ಜ್ಗಳಲ್ಲಿ ವಸತಿ ಮಾಡಬೇಕಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಸಾಲಕಾರಿ ಪೂಜಾರಿಗಳಾದ ಉದಯ ಭಟ್ ಪೂಜಾರಿ, ಗಂಗಾಧರ್ ಪೂಜಾರಿ , ಗುಂಡು ಭಟ್ ಪೂಜಾರಿ, ಪ್ರಸನ್ನ ಭಟ್ ಪೂಜಾರಿ, ಸಚಿನ್ ಭಟ್ ಪೂಜಾರಿ, ವಿನಾಯಕ್ ಭಟ್ ಪೂಜಾರಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಆಶಪ್ಪ, ಹಾಗೂ ದೇವಸ್ಥಾನ ಸಮಿತಿಯ ದತ್ತು.ಎಲ್.ನಿಂಬರಗಿ, ಸತೀಶ್ ರಜಪೂತ್, ರಮೇಶ್ ಪಟೇದ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.