ಆಳಂದ: ಈಚೆಗೆ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮದ ವಿವಿಧ ಸಂಘಟನೆ ಪ್ರಮುಖರು ಮಂಗಳವಾರ ಗ್ರಾಮದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದ ಬಸ್ ನಿಲ್ದಾಣದ ಮುಂಭಾಗದ ಆಳಂದ-ಅಕ್ಕಲಕೋಟ ಮಾರ್ಗದ ರಾಜ್ಯ ಹೆದ್ದಾರಿ ಮೇಲೆ ಮಾನವ ಸರಪಳಿ ನಿರ್ಮಿಸಿದರು. ಆರೋಪಿ ದುಷ್ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲು ಒತ್ತಾಯಿಸಲಾಯಿತು. ಹೋರಾಟಗಾರರಾದ ಮಹಿಬೂಬ ಫಣಿಬಂಧ, ಮಲ್ಲಯ್ಯ ಸ್ವಾಮಿ ಮಾತನಾಡಿ, ‘ಆಳಂದ ತಾಲ್ಲೂಕಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಈ ವರ್ಷದಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ದುಷ್ಟರಿಗೆ ಕಠಿಣ ಕಾನೂನು ಶಿಕ್ಷೆ ನೀಡಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಬೇಕು. ಅಂದಾಗ ಮಾತ್ರ ಇಂತಹ ಘಟನೆಗಳು ಪುನರಾರ್ವತನೆ ಆಗುವುದನ್ನು ತಡೆಗಟ್ಟಲು ಸಾಧ್ಯವಿದೆ‘ ಎಂದರು.
ಪ್ರಮುಖರಾದ ಸಿದ್ದರಾಮ ಅರಳಿಮರ, ಧರ್ಮಣ್ಣಾ ಕೌಲಗಿ, ಮಲ್ಲಿನಾಥ ಪಟ್ನೆ, ರಾಹುಲ ಜಿಡ್ಡಿಮನಿ, ಶಿವಪುತ್ರಪ್ಪ ಬುಕ್ಕಾ, ಮಲ್ಲಿನಾಥ ಏಲಿಕೇರಿ, ಗಣೇಶ ಓಂನಾಮಶೆಟ್ಟಿ ಇದ್ದರು. ಉಪತಹಶೀಲ್ದಾರ್ ರವೀಂದ್ರ ಶೇರಿಕಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಗ್ರಾಮದ ಸರ್ಕಾರಿ ಪಿಯು ಕಾಲೇಜು, ಪ್ರೌಢ ಶಾಲೆ ಹಾಗೂ ಶಿವಲಿಂಗೇಶ್ವರ ಪ್ರೌಢಶಾಲೆ, ಪಿಯು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.