ಕಲಬುರ್ಗಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಆಂಬುಲೆನ್ಸ್ಗಳ ಪೈಕಿ ಹಲವು ಇಂದೋ ನಾಳೆ ಗುಜರಿ ಸೇರುವಂತಿವೆ. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿದ ಆಂಬುಲೆನ್ಸ್ಗಳ ಪೈಕಿ ಹಲವು ವಾಹನಗಳು ಆಗಾಗ ಸಣ್ಣ ಪುಟ್ಟ ದುರಸ್ತಿಗೆ ಒಳಗಾಗುತ್ತಿವೆ, ಇನ್ನೂ ಕೆಲವು ರಿಪೇರಿಯಾಗದೆ ಮೂಲೆ ಸೇರಿವೆ. 3 ವರ್ಷಗಳಲ್ಲಿ ಸರ್ಕಾರದಿಂದ ಜಿಲ್ಲೆಯ ಆಸ್ಪತ್ರೆಗಳಿಗೆ ಬಂದಿರುವುದು 4 ಹೊಸ ಆಂಬುಲೆನ್ಸ್ಗಳು ಮಾತ್ರ.
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಒಟ್ಟಾರೆ 41 ಆಂಬುಲೆನ್ಸ್ ಇವೆ. ಇವುಗಳಲ್ಲಿ 3 ಕೆಟ್ಟು ನಿಂತಿವೆ. ಜೊತೆಗೆ 4 ಆಂಬುಲೆನ್ಸ್ಗಳು ಅಪಘಾತಕ್ಕೀಡಾಗಿವೆ. ಸುಸ್ಥಿತಿಯಲ್ಲಿರುವ 34 ಆಂಬುಲೆನ್ಸ್ಗಳ ಪೈಕಿ ಒಂದನ್ನು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಲ್ಲಿ ಪಡೆಯಲಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿರುವ ಈ ಆಂಬುಲೆನ್ಸ್ಗಳನ್ನು ತುರ್ತು ಸೇವೆಗೆ ಬಳಸಿ ಕೊಳ್ಳಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಯಿಂದ ಬೇರೊಂದು ಆಸ್ಪತ್ರೆಗೆ ಸಾಗಿಸಲು, ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಸಾಗಿಸಲು ಇವು ನೆರವಾಗುತ್ತಿವೆ. ದುಬಾರಿ ಹಣ ನೀಡಲಾಗದ ಬಡ ರೋಗಿಗಳಿಗೆ ಇವುಗಳಿಂದ ಹೆಚ್ಚಿನ ಅನುಕೂಲ ಆಗುತ್ತಿದೆ.
‘ನಗು ಮಗು ಆಂಬುಲೆನ್ಸ್’: ಬಾಣಂತಿ ಹಾಗೂ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಬಿಟ್ಟು ಬರಲು ನಗು ಮಗು ಎಂಬ ವಿಶೇಷ ಆಂಬುಲೆನ್ಸ್ ಇವೆ. ಜಿಲ್ಲೆಯ ಜಿಮ್ಸ್ ಆಸ್ಪತ್ರೆ ಮುಂದೆ 1 ಹಾಗೂ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 1 ನಗು ಮಗು ಆಂಬುಲೆನ್ಸ್ ಇವೆ. ಹೆರಿಗೆ ನೋವು ಕಾಣಿಸಿಕೊಂಡಾಗ ‘108 ಆಂಬುಲೆನ್ಸ್’ನಲ್ಲಿ ಆಸ್ಪತ್ರೆಗೆ ಬರುವ ಗರ್ಭಿಣಿಯರು, ಹೆರಿಗೆ ನಂತರ ಮಗುವಿನೊಂದಿಗೆ ನಗು ಮಗು ಆಂಬುಲೆನ್ಸ್ನಲ್ಲಿ ಮನೆಗೆ ತೆರಳುತ್ತಾರೆ. ಈ ಆಂಬುಲೆನ್ಸ್ ಸೇವೆ ಸಂಪೂರ್ಣ ಉಚಿತವಾಗಿದ್ದು, ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗುತ್ತಿದೆ.
ಜಿಮ್ಸ್ ಆಸ್ಪತ್ರೆಯಲ್ಲಿ 6 ಆಂಬುಲೆನ್ಸ್: ಜಿಮ್ಸ್ ಆಸ್ಪತ್ರೆಯಲ್ಲಿ ಒಟ್ಟು 6 ಆಂಬುಲೆನ್ಸ್ ಇವೆ. ಇವುಗಳ ಪೈಕಿ 3 ಆಂಬುಲೆನ್ಸ್ ತುಂಬಾ ಹಳೆಯವಾಗಿದ್ದು, ‘ನಿರುಪಯುಕ್ತ’ ಸ್ಥಿತಿಗೆ ತಲುಪಿವೆ. ಸದ್ಯ 1 ನಗು ಮಗು ಹಾಗೂ 2 ಸಾಮಾನ್ಯ ಆಂಬುಲೆನ್ಸ್ ಸೇವೆಯಲ್ಲಿವೆ. ಎರಡು ತಿಂಗಳ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ನೀಡಿದ 2 ಆಂಬುಲೆನ್ಸ್ಗಳೂ ಇವುಗಳಲ್ಲಿ ಸೇರಿವೆ. ಇವು ವೆಂಟಿಲೇಟರ್, ವ್ಯಾಕ್ಸಿನ್ ಫ್ರೀಜರ್, ಜಂಬೋ ಸಿಲಿಂಡರ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿವೆ.
‘ತುರ್ತು ಸೇವೆಗೆ ಆರೋಗ್ಯ ಕವಚ’: ಉಚಿತವಾಗಿ ತುರ್ತು ಆರೋಗ್ಯ ಸೇವೆ ಒದಗಿಸುವ ಆರೋಗ್ಯ ಕವಚ ಯೋಜನೆಯ 26 ಆಂಬುಲೆನ್ಸ್ಗಳು ಜಿಲ್ಲೆಯಲ್ಲಿವೆ.
108 ಸಂಖ್ಯೆಗೆ ಕರೆ ಮಾಡಿ ಇವುಗಳ ಸೇವೆ ಪಡೆಯಬಹುದು. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 9, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 9, ತಾಲ್ಲೂಕು ಆಸ್ಪತ್ರೆಗಳಲ್ಲಿ 7, ಎಸ್ಪಿ ಕಚೇರಿ ಬಳಿ 1 ಆಂಬುಲೆನ್ಸ್ ಸೇವೆಗೆ ಲಭ್ಯ ಇವೆ.
‘ಅಗತ್ಯವಿದ್ದರೆ ಖಾಸಗಿ ಆಂಬುಲೆನ್ಸ್ ಸೇವೆ’: ಸಾಮಾನ್ಯ ದಿನಗಳಲ್ಲಿ ರೋಗಿಗಳಿಗೆ ಆಂಬುಲೆನ್ಸ್ ಕೊರತೆ ಆಗಿಲ್ಲ, ಸಮುದಾಯದ ಆರೋಗ್ಯ ಹದಗೆಟ್ಟಾಗ ಮಾತ್ರ ಸೇವೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ತಿಳಿಸಿದರು.
ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದಾಗ ಸಮಸ್ಯೆ ಆಯ್ತು. ಆಗ ಎರಡು ತಿಂಗಳ ಮಟ್ಟಿಗೆ ಖಾಸಗಿ ಆಂಬುಲೆನ್ಸ್ಗಳನ್ನು ಬಾಡಿಗೆ ಪಡೆಯಲಾಗಿತ್ತು. ತುರ್ತು ಅಗತ್ಯವಿದ್ದಾಗ ಖಾಸಗಿ ಆಂಬುಲೆನ್ಸ್ ಸೇವೆ ಪಡೆಯುತ್ತೇವೆ ಎಂದರು.
ಆಂಬುಲೆನ್ಸ್ಗಳ ಸಣ್ಣ ಪುಟ್ಟ ರಿಪೇರಿಯನ್ನು ಇಲಾಖೆಯಿಂದಲೇ ಮಾಡಿಸಲಾಗುತ್ತದೆ. ಜಾಸ್ತಿ ಮೊತ್ತ ಇದ್ದರೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಲಾಗುತ್ತದೆ. ತುಂಬಾ ಹಳೆಯ ವಾಹನಗಳಿಗೆ ಆರ್ಟಿಒ ‘ನಿರುಪಯುಕ್ತ’ ಎಂದು ಪತ್ರ ನೀಡಿದರೆ ಅವುಗಳ ವಿಲೇವಾರಿಗೆ ಟೆಂಡರ್ ಕರೆಯಲಾಗುತ್ತದೆ. ಹೊಸ ಆಂಬುಲೆನ್ಸ್ಗಳಿಗೆ ಬೇಡಿಕೆ ಸಲ್ಲಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.