ಕಲಬುರ್ಗಿ: ಸಮ್ಮೇಳನದ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಅಲ್ಲದೇ ಕಿಟ್ ವಿತರಣೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಜಿಲ್ಲೆಗಳ ಸಾಹಿತ್ಯಾಸಕ್ತರು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳು ಬುಧವಾರ ಬೆಳಿಗ್ಗೆ ಸಾಹಿತ್ಯ ಸಮ್ಮೇಳನದ ಆವರಣದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ವಿವಿಧ ಜಿಲ್ಲೆಗಳ ಪ್ರತಿನಿಧಿಗಳಿಗೆಂದೇ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆಯಾದರೂ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ನೋಂದಣಿ ಮಾಡಿಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಯಾದಗಿರಿ ಜಿಲ್ಲೆಯ ಕೌಂಟರ್ನಲ್ಲಿ ಯಾರೂ ಇಲ್ಲ. ಸಮ್ಮೇಳನ ಆರಂಭಗೊಳ್ಳುವ ಮುನ್ನಾ ದಿನವೇ ನೋಂದಣಿ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಇಲ್ಲಿ ಬೆಳಿಗ್ಗೆ 8 ಗಂಟೆಯಾದರೂ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ' ಎಂದು ಶಹಾಪುರದ ಸಾಹಿತಿ ರಾಘವೇಂದ್ರ ಹಾರಣಗೇರಾ ತಿಳಿಸಿದರು.
"ನಸುಕಿನ 5.30ಕ್ಕೆ ಬಂದು ಕೌಂಟರ್ನಲ್ಲಿ ನಿಂತಿದ್ದೇವೆ. ನಮ್ಮ ಸಮಸ್ಯೆಗಳನ್ನು ಆಲಿಸಲು ಇಲ್ಲಿ ಯಾರೂ ಇಲ್ಲ. ಈ ರೀತಿ ನಿರ್ಲಕ್ಷ್ಯ ಹಿಂದಿನ ಸಮ್ಮೇಳನಗಳಲ್ಲಿ ಆಗಿರಲಿಲ್ಲ. ಅಚ್ಚುಕಟ್ಟಾದ ವ್ಯವಸ್ಥೆ ಇಲ್ಲಿ ಮಾಡಿಲ್ಲ' ಎಂದು ಮೈಸೂರು ಜಿಲ್ಲೆಯ ನಂಜನಗೂಡಿನ ಕಮಲೇಶ ಆರೋಪಿಸಿದರು.
ಅವರೊಂದಿಗೆ ಮುಖಂಡರಾದ ರಾಮು, ಶಿವಣ್ಣ, ಸಣ್ಣಯ್ಯ ವಾಸುದೇವಮೂತರ್ಿ ಸಹ ದನಿಗೂಡಿಸಿದರು. ಇದೇ ರೀತಿಯ ನಿರಾಸಕ್ತಿ ದೋರಣೆ ಮುಂದುವರೆದಲ್ಲಿ, ಸಮ್ಮೇಳನದ ಪ್ರವೇಶದ್ವಾರದಲ್ಲೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಮೈಸೂರು ಜಿಲ್ಲೆಯ ಕೌಂಟರ್ ಎದುರೇ ಕೆಲ ಹೊತ್ತು ಪ್ರತಿಭಟನೆ ನಡೆಸಿದ ಅವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ವಿರುದ್ಧ ಘೋಷಣೆ ಹಾಕಿದರು.
"ಸಮ್ಮೇಳನದ ಪ್ರತಿನಿಧಿಗಳ ಕಿಟ್ಟನ್ನುವಾಹನಗಳಲ್ಲಿ ತರುತ್ತಿದ್ದೇವೆ. ಹಂತಹಂತವಾಗಿ ತರುತ್ತಿದ್ದೇವೆ. ನೋಂದಣಿ ಮಾಡಿಕೊಳ್ಳುವ ಪ್ರತಿನಿಧಿಗಳಿಗೆಲ್ಲ ಕಿಟ್ ವಿತರಿಸುತ್ತೇವೆ. ಎಲ್ಲರೂ ತಾಳ್ಮೆಯಿಂದ ಸಹಕರಿಸಬೇಕು' ಎಂದು ನೋಂದಣಿ ಪ್ರಕ್ರಿಯೆ ಉಸ್ತುವಾರಿ ಅಧಿಕಾರಿಗಳು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.