ಕಲಬುರಗಿ: ರಾಜ್ಯ ಸರ್ಕಾರವು ಲೋಕಾಯುಕ್ತ ಸಂಸ್ಥೆಯನ್ನು ಪುನರ್ ಸ್ಥಾಪಿಸಿದೆ. ಸಂಸ್ಥೆಗೆ ಇದ್ದ ಎಲ್ಲ ಅಧಿಕಾರ
ಗಳನ್ನು ನೀಡಿ, ಭ್ರಷ್ಟಾಚಾರ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಲು ಮುಂದಾಗಿದೆ. ಆದರೆ, ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಗೆ ಅಗತ್ಯ ಸಿಬ್ಬಂದಿಯೇ ಇಲ್ಲ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬರ್ಖಾಸ್ತು ಆದ ಬಳಿಕ ಅಲ್ಲಿದ್ದ 42 ಪ್ರಕರಣ ಕಲಬುರಗಿ ಲೋಕಾಯುಕ್ತ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ದಾಖಲೆಗಳು, ನಗದು, ಚಿನ್ನ ಮತ್ತಿತರ ವಸ್ತುಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
ಬಾಕಿ ಪ್ರಕರಣಗಳ ತನಿಖೆ ಜೊತೆಗೆ ಹೊಸ ಪ್ರಕರಣಗಳನ್ನು ಪತ್ತೆ ಮಾಡಿ, ತನಿಖೆ ಕೈಗೊಳ್ಳಬೇಕಿದೆ.
‘ಈಗ ಇರುವ ಸಿಬ್ಬಂದಿ ಸಾಕಾಗದು. ಜೊತೆಗೆ, ಕಳಪೆ ಕಾಮಗಾರಿಗಳ ಕುರಿತು ದೂರು ಬಂದ ಬಳಿಕ ಅಲ್ಲಿಗೆ ತೆರಳಿ ತಪಾಸಣೆ ನಡೆಸಿ ವರದಿ ಲೋಕಾಯುಕ್ತರಿಗೆ ನೀಡಬೇಕು. ಪ್ರತಿ ತಿಂಗಳು ತಾಲ್ಲೂಕುಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಕಾಲೇಜು, ವಿಶ್ವವಿದ್ಯಾಲಯ ಮತ್ತಿತರ ಕಡೆ ಲೋಕಾಯುಕ್ತ ಸಂಸ್ಥೆ ಬಗ್ಗೆ ಜಾಗೃತಿ ಮೂಡಿಸಬೇಕು. ಇವೆಲ್ಲದರ ನಿರ್ವ
ಹಣೆಗೆ ಈಗ ಇರುವ ಸಿಬ್ಬಂದಿಗೆ ಸಮಯ ಸಾಕಾಗುತ್ತಿಲ್ಲ. ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದರು.
‘ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ 20ಕ್ಕೂ ಅಧಿಕ ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ಗಳನ್ನು ಲೋಕಾಯುಕ್ತ ಪೊಲೀಸ್ ಠಾಣೆಗಳಿಗೆ ಸರ್ಕಾರ ನೀಡಬೇಕು. ಕೆಲ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಲೋಕಾಯುಕ್ತ ಆಗಿದೆ. ಪೊಲೀಸ್ ಠಾಣೆಗೆ ತಾಂತ್ರಿಕ ಸಿಬ್ಬಂದಿಯಾದ ಶೀಘ್ರ ಲಿಪಿಕಾರರು (ಸ್ಟೆನೊಗ್ರಾಫರ್) ಮತ್ತು ಕಾರ್ಯಾಚರಣೆಗೆ ಕಾನ್ಸ್ಟೆಬಲ್ಗಳು ಬೇಕು’ ಎಂದು ಅವರು ಹೇಳಿದರು.
‘ಎಸಿಬಿಯವರು ದಾಳಿ ಮಾಡಿದ್ದ ಪ್ರಕರಣಗಳ ತನಿಖೆಯ ಜೊತೆಗೆ, ಲೋಕಾಯುಕ್ತ ಠಾಣೆಗೆ ಬರುವ ದೂರು ಆಧರಿಸಿ ನಮ್ಮ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನಷ್ಟು ಸಿಬ್ಬಂದಿ ನೀಡಿದರೆ ಭ್ರಷ್ಟಾಚಾರ ಆರೋಪಗಳ ಬಗ್ಗೆ ಕಾರ್ಯಾಚರಣೆ , ತನಿಖೆ ನಡೆಸಿ ಶೀಘ್ರ ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯ’ ಎಂದು ಕಲಬುರಗಿ ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೂಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಸತಿ ನಿಲಯ, ಸರ್ಕಾರಿ ಶಾಲೆ, ಕಚೇರಿಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ, ಇನ್ನಷ್ಟು ಸಿಬ್ಬಂದಿ ಬೇಕಾಗುತ್ತದೆ’ ಎಂದು ಅವರು ತಿಳಿಸಿದರು.
ಸದ್ಯಕ್ಕೆ ಇರುವ ಸಿಬ್ಬಂದಿ ಎಷ್ಟು?
ಕಲಬುರಗಿ ಜಿಲ್ಲೆಯಲ್ಲಿ ಲೋಕಾಯುಕ್ತ ಸಂಸ್ಥೆಗೆ ಎಸ್ಪಿ, ಡಿವೈಎಸ್ಪಿ, ಮೂವರು ಪೊಲೀಸ್ ಇನ್ಸ್ಪೆಕ್ಟರ್, ಆರು ಹೆಡ್ ಕಾನ್ಸ್ಟೆಬಲ್ ಮತ್ತು ಒಂಬತ್ತು ಕಾನ್ಸ್ಟೆಬಲ್ಗಳಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಡಿವೈಎಸ್ಪಿ, ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್, ಐವರು ಹೆಡ್ ಕಾನ್ಸ್ಟೆಬಲ್ ಮತ್ತು ಆರು ಜನ ಕಾನ್ಸ್ಟೆಬಲ್ಗಳಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಡಿವೈಎಸ್ಪಿ, ಪೊಲೀಸ್ ಇನ್ಸ್ಪೆಕ್ಟರ್, ಐವರು ಹೆಡ್ ಕಾನ್ಸ್ಟೆಬಲ್ ಹಾಗೂ ಆರು ಕಾನ್ಸ್ಟೆಬಲ್ಗಳು ಇದ್ದಾರೆ.
*
ಪೊಲೀಸ್ ಸಿಬ್ಬಂದಿಯ ಜೊತೆಗೆ ತಾಂತ್ರಿಕ ಸಿಬ್ಬಂದಿ ಹಾಗೂ ಶೀಘ್ರ ಲಿಪಿ ಗೊತ್ತಿರುವವರನ್ನು ಒದಗಿಸಬೇಕಿದೆ. ಈ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದ್ದೇವೆ
-ಎ.ಆರ್. ಕರ್ನೂಲ್, ಲೋಕಾಯುಕ್ತ ಎಸ್ಪಿ, ಕಲಬುರಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.