ಕಲಬುರ್ಗಿ: ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಆದ್ದರಿಂದ ಲಾಕ್ಡೌನ್ ಇನ್ನಷ್ಟು ದಿನ ವಿಸ್ತರಿಸಿದರೆ ಒಳ್ಳೆಯದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಕೂಡಾ ತಿಳಿಸಿದ್ದೇವೆ. ಕೊರೊನಾ ಹೆಚ್ಚಾದರೆ ಇನ್ನೂ ಕಠಿಣ ಲಾಕ್ಡೌನ್ ಮಾಡಬಹುದು.
ಇನ್ನು ಹತ್ತು ದಿನ ಲಾಕ್ಡೌನ್ ವಿಸ್ತರಿಸಿದರೆ ಉತ್ತಮ ಅನ್ನುವುದು ನನ್ನ ಅಭಿಪ್ರಾಯ ಎಂದರು.
ರಾಜ್ಯದಲ್ಲಿ ಆಮ್ಲಜನಕ ಕೊರತೆ ನಿವಾರಿಸಲು ಗಣಿ ಇಲಾಖೆಯಿಂದ ಹತ್ತು ಟ್ಯಾಂಕರ್ ನೀಡುತ್ತಿದ್ದೇವೆ. ಹತ್ತು ದಿನದಲ್ಲಿ ಪ್ರತಿ ವಿಭಾಗಕ್ಕೆ ಎರಡೆರಡು ಆಮ್ಲಜನಕ ಟ್ಯಾಂಕರ್ ನೀಡಲಾಗುತ್ತದೆ. ಮೂರನೇ ಅಲೆಗಾಗಿ ಬೇಕಾದ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳುತ್ತೇವೆ ಎಂದರು.
ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಕಪ್ಪು ಶಿಲೀಂಧ್ರ ಕಾಯಿಲೆ ಮಧುಮೇಹ ಇದ್ದವರಿಗೆ ಬರುತ್ತದೆ. ಅದಕ್ಕೂ ಮುಂಬೈನಿಂದ ಔಷಧಿ ತರಿಸಿಕೊಡಲಾಗಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಹೇಳಿದರು.