ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಶ್ರೀಕೃಷ್ಣ ಜನ್ಮಾಷ್ಮಮಿ ಸಡಗರ: ಮೊಸರು ಗಡಿಗೆ ಒಡೆದು ಸಂಭ್ರಮ

Published 7 ಸೆಪ್ಟೆಂಬರ್ 2023, 16:09 IST
Last Updated 7 ಸೆಪ್ಟೆಂಬರ್ 2023, 16:09 IST
ಅಕ್ಷರ ಗಾತ್ರ

ಕಲಬುರಗಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸ್ಟೇಷನ್ ಬಜಾರ್‌ನ ವಿಠ್ಠಲ ಮಂದಿರದಲ್ಲಿ ಕೃಷ್ಣನ ಲೀಲೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಯಾದ ಮೊಸರು ಗಡಿಗೆ ಒಡೆಯುವ ಹಾಗೂ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣನ ರಥೋತ್ಸವ ಸಂಭ್ರಮದಿಂದ ಜರುಗಿತು.

ಮೊಸರು ಗಡಿಗೆ ಒಡೆಯುವ ಸಡಗರವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಕೃಷ್ಣನ ಭಕ್ತರು ದೇವಸ್ಥಾನ ಆವರಣದಲ್ಲಿ ಸೇರಿದ್ದರು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ– ಪುನಸ್ಕಾರಗಳು ನಡೆದವು. ಕೃಷ್ಣನ ಮೂರ್ತಿಗೆ ತುಳಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ವಿಠ್ಠಲ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಗಾಥಾ ಪಾರಾಯಣ, ಕೀರ್ತನೆ, ಭಜನೆಯಂತಹ ಕಾರ್ಯಕ್ರಮಗಳಿಗೆ ಮೊಸರು ಕುಡಿಕೆ ಒಡೆಯುವುದರೊಂದಿಗೆ ಗುರುವಾರ ತೆರೆಬಿತ್ತು.

ಬೆಳಿಗ್ಗೆಯೇ ಶ್ರೀಕೃಷ್ಣನ ಮೂರ್ತಿಗೆ ಮಹಾಪೂಜೆ, ಅಲಂಕಾರ ಮಾಡಲಾಯಿತು. ಹರಿ ಕೀರ್ತನೆಯ ಬಳಿಕ ಶ್ರೀಕೃಷ್ಣ ಪಲ್ಲಕ್ಕಿ ಉತ್ಸವ ಜರುಗಿತು. ದೇವಸ್ಥಾನದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಪ್ರಮುಖ ರಸ್ತೆಯಲ್ಲಿ ಶ್ರೀಕಷ್ಣನ ಭಾವಚಿತ್ರದ ಮೆರವಣಿಗೆ ನಡೆಯಿತು. ಮೊಸರು ಗಡಿಗೆಯನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು. ಕೃಷ್ಣನ ಭಕ್ತರು ಭಜನೆ, ಭಕ್ತಿಗೀತೆಗಳು ಹಾಡಿ ಸಂಭ್ರಮಿಸಿದರು.‌

ದೇವಸ್ಥಾನದ ಆವರಣದಲ್ಲಿ ಎತ್ತರದ ಹಗ್ಗಕ್ಕೆ ಕಟ್ಟಿದ್ದ ಮೊಸರು ಗಡಿಗೆ ಒಡೆಯಲು ಹತ್ತಾರು ಯುವಕರು ಮಾನವ ಪಿರಾಮಿಡ್ ರಚಿಸಿದರು. ತುದಿಯಲ್ಲಿ ಇದ್ದ ಯುವಕ ಮೊಸರು ಗಡಿಗೆ ಒಡೆಯುತ್ತಿದ್ದಂತೆ ಸುತ್ತಲೂ ನೆರೆದಿದ್ದ ಸಾವಿರಾರು ಭಕ್ತರು ಜೈಘೋಷ ಮೊಳಗಿಸಿದರು.

ಯುವಕರು ಮತ್ತು ಯುವತಿಯರು ಕೈ–ಕೈಹಿಡಿದು ಗಿರಿಗಿಟ್ಲೆ ಆಡಿದರು. ಮಹಿಳೆಯರು ವೃತ್ತಕಾರವಾಗಿ ನಿಂತು ಪರಸ್ಪರ ಕೈಹಿಡಿದು ಕುಣಿದು ಸಂಭ್ರಮಿಸಿದರು. ದೇವಸ್ಥಾನದಲ್ಲಿ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಇಸ್ಕಾನ್‌ನಲ್ಲಿ ಕೀರ್ತನೆ: ನಗರದ ಸ್ಟೇಷನ್‌ ಬಜಾರ್‌ನ ಹೇರೂರ ಅಪಾರ್ಟ್‌ಮೆಂಟ್‌ನಲ್ಲಿನ ಇಸ್ಕಾನ್‌ ಭಕ್ತಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಜನೆ, ಅಭಿಷೇಕ, ಪ್ರವಚನ, ಆರತಿ, ಕೀರ್ತನೆ, ಮಹಾಪ್ರಸಾದ ವಿತರಣೆ ನಡೆಯಿತು.

ಕಲಬುರಗಿಯ ಇಸ್ಕಾನ್‌ ಭಕ್ತಿ ಕೇಂದ್ರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಜನೆ ಮಾಡಿದ ಭಕ್ತರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಇಸ್ಕಾನ್‌ ಭಕ್ತಿ ಕೇಂದ್ರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಜನೆ ಮಾಡಿದ ಭಕ್ತರು –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿಠ್ಠಲ ಮಂದಿರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹೂವುಗಳಿಂದ ಅಲಂಕೃತವಾದ ಶ್ರೀಕೃಷ್ಣನ ಮೂರ್ತಿ –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿಠ್ಠಲ ಮಂದಿರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹೂವುಗಳಿಂದ ಅಲಂಕೃತವಾದ ಶ್ರೀಕೃಷ್ಣನ ಮೂರ್ತಿ –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಗುರುವಾರ ನಡೆದ ರಥೋತ್ಸದಲ್ಲಿ ಪಾಲ್ಗೊಂಡಿದ್ದ ಭಕ್ತರು –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಗುರುವಾರ ನಡೆದ ರಥೋತ್ಸದಲ್ಲಿ ಪಾಲ್ಗೊಂಡಿದ್ದ ಭಕ್ತರು –ಪ್ರಜಾವಾಣಿ ಚಿತ್ರ
ಶ್ರೀಕೃಷ್ಣ ಮಂದಿರದಲ್ಲಿ ರಥೋತ್ಸವ
ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಗುರುವಾರ ನಡೆದ ರಥೋತ್ಸವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಅಖಿಲ ಭಾರತ ಮಾಧ್ವ ಮಹಾ ಮಂಡಲ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದ ಎರಡು ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಗುರುವಾರ ಬೆಳಿಗ್ಗೆ ಶ್ರೀಕೃಷ್ಣನ ಮೂರ್ತಿಗೆ ಪಂಚಾಮೃತ ಅಭಿಷೇಕ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. 38 ಜನ ಪಂಡಿತರು ವಿಷ್ಣು ಸಹಸ್ರನಾಮ ಗೀತಾ ಪಾರಾಯಣ ಮಾಡಿದರು. ಜ್ಞಾನಾಂಜನ ಭಜನಾ ಮಂಡಳಿಯು ಭಜನೆ ಹಾಡು ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆ ನಂತರ ಮಂದಿರದ ಆವರಣದಲ್ಲಿ ಶ್ರೀಕೃಷ್ಣನ ರಥೋತ್ಸವ ಅದ್ದೂರಿಯಾಗಿ ಜರುಗಿತು. ಕೃಷ್ಣ ಲೀಲೋತ್ಸವ ವಿಟ್ಲಪಿಂಡಿ ಗೋಪಾಲ ಕಾವಲಿ ತೋಟ್ಟಿಲು ಸೇವೆ ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆದವು. ಪಂ. ಗೋಪಾಲಾಚಾರ್ಯ ಅಕಮಂಚಿ ಅವರು ಪ್ರವಚನ ನೀಡಿದರು. ಮಂಡಲದ ಅಧ್ಯಕ್ಷ ರಂಗನಾಥ ದೇಸಾಯಿ ಉಪಾಧ್ಯಕ್ಷ ಗಿರಿಧರ್ ಭಟ್ ಕಾರ್ಯದರ್ಶಿ ಕಿಶೋರ್ ದೇಶಪಾಂಡೆ ಜಂಟಿ ಕಾರ್ಯದರ್ಶಿ ಮಂಜುನಾಥ ಕುಲಕರ್ಣಿ ಖಜಾಂಚಿ ನಾರಾಯಣ ದೇಸಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT