ಕಲಬುರಗಿ: ನಗರದ ಕೋಟನೂರು ಬಳಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಕಿಡಿಗೇಡಿಗಳು ಅವಮಾನ ಮಾಡಿದ್ದನ್ನು ಖಂಡಿಸಿ ನಗರದಾದ್ಯಂತ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ.
ನಗರದ ಜನನಿಬಿಡ ಸೂಪರ್ ಮಾರ್ಕೆಟ್ ನ ಎಲ್ಲ ಅಂಗಡಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿ ರಸ್ತೆಯಲ್ಲಿ ಘೋಷಣೆ ಕೂಗಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ಅಡ್ಡಗಟ್ಟಿ ಮಾನವ ಸರಪಳಿ ನಿಲ್ಲಿಸಿದ ಸಿಪಿಐಎಂ ಪಕ್ಷ ಹಾಗೂ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಬಳಿಕ ಸ್ಟೇಷನ್ ಬಜಾರ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಶಕೀಲ್ ಅಂಗಡಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು.
ಸರ್ದಾರ್ ಪಟೇಲ್ ವೃತ್ತ ಹಾಗೂ ಜಗತ್ ವೃತ್ತಗಳಲ್ಲಿಯೂ ಘಟನೆ ಖಂಡಿಸಿ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ವಾಹನಗಳು ಸಂಚರಿಸುವ ಮಾರ್ಗವನ್ನು ಬದಲು ಮಾಡಲಾಗಿತ್ತು. ಕೋರ್ಟ್ ವೃತ್ತದ ಬಳಿ ಟ್ರಾಫಿಕ್ ದಟ್ಟಣಿಯಿಂದಾಗಿ ಆಂಬುಲೆನ್ಸ್ ಕೆಲಕಾಲ ಸಿಲುಕಿಕೊಂಡಿತ್ತು.
ವಿಜಯಪುರ ಕಡೆಯಿಂದ ಬಂದ ವಾಹನಗಳನ್ನು ರಿಂಗ್ ರಸ್ತೆಯ ನಾಗನಹಳ್ಳಿ ಬಳಿ ಕಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ತಮ್ಮ ಮನೆಗಳನ್ನು ತಲುಪಲು ಪರದಾಡಿದರು. ಕೆಲವರು ಕಾಲ್ನಡಿಗೆಯ ಮೂಲಕ ತೆರಳಿದರು.