ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ: ಮುತ್ತಪ್ಪ ದೇವಾಲಯದ 80ನೇ ವಾರ್ಷಿಕ ತೆರೆ ಮಹೋತ್ಸವಕ್ಕೆ ಚಾಲನೆ

Published 20 ಮಾರ್ಚ್ 2024, 5:33 IST
Last Updated 20 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದ ಮೀನುಪೇಟೆಯಲ್ಲಿನ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ 80ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ವಾರ್ಷಿಕ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಮಂಗಳವಾರ ಮುಂಜಾನೆ 5.30ಕ್ಕೆ ಗಣಪತಿ ಹೋಮ ನಡೆಯಿತು. ಬಳಿಕ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ 6ಕ್ಕೆ ದೇವಾಲಯದಲ್ಲಿ ಮುತ್ತಪ್ಪ ವೆಳ್ಳಾಟಂ ನಡೆಯಿತು. ರಾತ್ರಿ 7ಕ್ಕೆ ನಡೆದ ಸಭಾ ಕಾರ್ಯಕ್ರಮಕ್ಕೆ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್ ಅವರು ಚಾಲನೆ ನೀಡಿದರು. ದೇವಾಲಯಕ್ಕೆ ನೂತನವಾಗಿ ಪ್ರವೇಶ ಮಹಾದ್ವಾರವನ್ನು ಬಿಜೆಪಿ ಮುಖಂಡ ಕೆ.ಜಿ.ಬೋಪಯ್ಯ ಅವರು ಲೋಕಾರ್ಪಣೆಗೊಳಿಸಿದರು.

ರಾತ್ರಿ ದೇವಾಲಯದ ಆಡಳಿತ ಮಂಡಳಿಯಿಂದ ಅನ್ನಸಂತರ್ಪಣೆ ನಡೆಯಿತು. ಅನ್ನಸಂತರ್ಪಣೆಯ ಬಳಿಕ ಕೇರಳದ ಶ್ರೀ ವೇದಾಭ್ಯಾಸ ವಿದ್ಯಾಪೀಠ ವೇದಾಚಾರ್ಯ ಅಜಯ್ ಕುಮಾರ್ ಅವರಿಂದ ಪ್ರಬೋಧನೆ ನೆರವೇರಿತು.

ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಜನರು ಹಾಜರಿದ್ದರು.

ಉತ್ಸವದ ಅಂಗವಾಗಿ ಬುಧವಾರ ಮಧ್ಯಾಹ್ನ 2ಗಂಟೆಗೆ ದೇವರ ಮಲೆ ಇಳಿಸುವ ಧಾರ್ಮಿಕ ಕಾರ್ಯ ನಡೆಯಲಿದೆ. ಸಂಜೆ 5ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ ನಡೆದು ಬಳಿಕ 5.30ಕ್ಕೆ ಕಲಶದೊಂದಿಗೆ ತಾಲಪ್ಪೊಲಿ ಮೆರವಣಿಗೆ ನಡೆಯಲಿದೆ. ಪಟ್ಟಣದ ತೆಲುಗರ ಬೀದಿಯಿಂದ ಆರಂಭಗೊಳ್ಳಲಿರುವ ಮೆರವಣಿಗೆಯು ಚಂಡೆಮೇಳ ಸಹಿತವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಾಲಯಕ್ಕೆ ಆಗಮಿಸುವುದು. ಮೆರವಣಿಗೆಯ ಬಳಿಕ ದೇವಾಲಯದಲ್ಲಿ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ದೈವಗಳ ವೆಳ್ಳಾಟಂ ನಡೆಯಲಿದೆ.

ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಈ ಸಂದರ್ಭ ದೇವಾಲಯದ ಅಭಿವೃದ್ಧಿ ಕಾರ್ಯಕ್ಕಾಗಿ ಆಯೋಜಿಸಿರುವ ಕೂಪನ್‌ಗಳ ಫಲಿತಾಂಶವನ್ನು ಕಲಾಮಂಟಪದ ವೇದಿಕೆಯಲ್ಲಿ ಪ್ರಕಟಿಸಲಾಗುತ್ತದೆ.

ಉತ್ಸವದ ಕೊನೆಯ ದಿನವಾದ ಗುರುವಾರದಂದು ಮುಂಜಾನೆ ಶಾಸ್ತಪ್ಪನ್ ಹಾಗೂ ಗುಳಿಗನ ತೆರೆ, ಬಳಿಕ 4ಕ್ಕೆ ತಿರುವಪ್ಪನ ತೆರೆ, ಬೆಳಿಗ್ಗೆ 8ಕ್ಕೆ ಭಗವತಿ, 10ಕ್ಕೆ ವಸೂರಿಮಾಲಾ ಹಾಗೂ 11ಕ್ಕೆ ವಿಷ್ಣುಮೂರ್ತಿ ತೆರೆಗಳು ನಡೆಯಲಿವೆ. ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ವಿಷ್ಣುಮೂರ್ತಿ ವಾರಣದೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT