ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಅರಣ್ಯ ಹಕ್ಕು ಕಾಯ್ದೆ ಫಲಾನುಭವಿಗಳ ವರದಿ ನೀಡದ ಅಧಿಕಾರಿ ವಿರುದ್ಧ ಕ್ರಮ

ಅರಣ್ಯ ಹಕ್ಕು ಕಾಯ್ದೆ: ತಿರಸ್ಕೃತ ಅರ್ಜಿ ಮರು ಪರಿಶೀಲಿಸಿ ಅ.7ರ ಒಳಗೆ ಮಾಹಿತಿ ನೀಡಲು ಡಿ.ಸಿ ಸೂಚನೆ
Last Updated 22 ಸೆಪ್ಟೆಂಬರ್ 2020, 20:30 IST
ಅಕ್ಷರ ಗಾತ್ರ

ಮಡಿಕೇರಿ: ಅರಣ್ಯ ಹಕ್ಕು ಕಾಯ್ದೆಯ ಅಡಿ ಅರಣ್ಯ ಹಕ್ಕುಪತ್ರ ನೀಡುವ ಸಂಬಂಧ ಮರು ಪರಿಶೀಲನೆಗೆ ಬಾಕಿ ಇರುವ 1,872 ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಗ್ರಾ.ಪಂ ಅರಣ್ಯ ಹಕ್ಕು ಸಮಿತಿ) ಮರು ಪರಿಶೀಲಿಸಿ ಅ. 7ರೊಳಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ಮಂಗಳವಾರ ನಡೆದ ಜಿಲ್ಲಾಮಟ್ಟದ ಸಮಸ್ಯೆ ಪರಿಹಾರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಹಲವು ತಿಂಗಳಿನಿಂದ ಅರಣ್ಯ ವಾಸಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ತಿರಸ್ಕೃತಗೊಂಡಿರುವ ಅರಣ್ಯ ಹಕ್ಕುಪತ್ರ ಅರ್ಜಿಗಳನ್ನು ಮರು ಪರಿಶೀಲಿಸಿ ಉಪ ವಿಭಾಗ ಮಟ್ಟಕ್ಕೆ ವರದಿ ನೀಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ವೈಯಕ್ತಿಕ ಅರಣ್ಯ ಹಕ್ಕುಪತ್ರಗಳು ತಿರಸ್ಕೃತಗೊಳ್ಳಲು ಕಾರಣವೇನು? ತಿರಸ್ಕೃತಗೊಂಡ ಅರ್ಜಿಗಳನ್ನು ಮರು ಪರಿಶೀಲನೆ ನಡೆಸಲು ಇದುವರೆಗೆ ಏಕೆ ಆಗಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ಮಾಹಿತಿ ನೀಡಿ, ‘ಅರಣ್ಯ ಹಕ್ಕು ಪತ್ರ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,872 ಅರ್ಜಿಗಳು ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಸೌಲಭ್ಯ ಕಲ್ಪಿಸಬೇಕಿದೆ’ ಎಂದು ಕೋರಿದರು.

ಅರಣ್ಯ ಹಕ್ಕು ಕಾಯ್ದೆಯ ಅಡಿ ಇದುವರೆಗೆ 1,739 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಇದರಲ್ಲಿ 1,300 ಅರ್ಜಿಗಳಿಗೆ ಆರ್‌ಟಿಸಿ ನೀಡಲು ಸಾಧ್ಯವಾಗಿದೆ. ಉಳಿದ ಅರ್ಜಿಗಳಿಗೆ ಆರ್‌ಟಿಸಿ ನೀಡಲು ಸಾಧ್ಯವಾಗಿಲ್ಲ ಎಂದು ಐಟಿಡಿಪಿ ಅಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು, ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ವರದಿ ನೀಡಬೇಕು. ಅರ್ಹರಿಗೆ ಸೌಲಭ್ಯಗಳು ತಲುಪಬೇಕು ಎಂದು ಅವರು ತಿಳಿಸಿದರು.

ಶಿವಕುಮಾರ್ ಅವರು, ಸಮುದಾಯ ಹಕ್ಕುಗಳಲ್ಲಿ 45 ಅರ್ಜಿಗಳಲ್ಲಿ 12 ಅರ್ಜಿಗಳಿಗೆ ಹಕ್ಕು ಪತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು.

ತಿತಿಮತಿ ವ್ಯಾಪ್ತಿಯ ಚೈನಿಹೆಡ್ಲು, ನಾಗರಹೊಳೆ ವ್ಯಾಪ್ತಿಯ ಕೊಡಂಗೇರಿ, ಮಾಲ್ದಾರೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಆಶ್ರಮ ಶಾಲೆ, ಮನೆ ನಿರ್ಮಾಣ ಮತ್ತಿತರಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಬೇಕಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಗಿರಿಜನ ಹಾಡಿಗಳಲ್ಲಿ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸಹಕರಿಸಬೇಕಿದೆ ಎಂದು ಶಿವಕುಮಾರ್ ಅವರು ಮನವಿ ಮಾಡಿದರು.

ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಕಂಡು, ಡಿಎಫ್‍ಒ ಚಕ್ರಪಾಣಿ, ನಿಲೇಶ್ ಶಿಂಧೆ, ತಾ.ಪಂ ಇಒ ಷಣ್ಮುಗಂ, ಐಟಿಡಿಪಿ ಇಲಾಖೆ ವ್ಯವಸ್ಥಾಪಕ ದೇವರಾಜು, ರಂಗನಾಥ್, ಎಸಿಎಫ್‍ಗಳಾದ ಅಂತೋಣಿ, ಪಿಡಿಒ ಸುನಿತಾ, ವಲಯ ಅರಣ್ಯಾಧಿಕಾರಿಗಳು ನೆಹರು, ಶ್ರೀಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT