ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ. ಇದು ಜಾತಿ ಕುರಿತ ಚುನಾವಣೆಯಲ್ಲ, ಇದು ದೇಶದ ಅಭಿವೃದ್ಧಿ ಮತ್ತು ಭದ್ರತೆ ಕುರಿತ ಚುನಾವಣೆ ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ಜೈನಿ ಪ್ರತಿಪಾದಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ಜಾತಿಯ ಮತಗಳನ್ನು ಕೇಳಿರುವುದು ಸರಿಯಲ್ಲ. ಅದಕ್ಕೆ ಪೂರಕವಾಗಿ ಕೆಲವರು ಜಾತಿಯ ಆಧಾರದ ಮೇಲೆ ಬೆಂಬಲಿಸಿ ಎಂದು ಕರೆ ನೀಡುತ್ತಿರುವುದೂ ಸರಿಯಲ್ಲ. ಲೋಕಸಭಾ ಚುನಾವಣೆಯಲ್ಲಿ ಜಾತಿ ಮುಖ್ಯವೇ ಅಲ್ಲ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರೆಭಾಷೆ ಮತ್ತು ಒಕ್ಕಲಿಗ ಸಮುದಾಯದ ಹೆಚ್ಚಿನವರು ರೈತರಾಗಿದ್ದಾರೆ. ಪ್ರಧಾನಿಯವರು ರೈತರಿಗೆ ನೀಡುವ ಕೊಡುಗೆಗಳನ್ನು ಅವರು ಮರೆತಿಲ್ಲ ಎಂದೂ ಅವರು ಹೇಳಿದರು.
ಪಕ್ಷದ ಜಿಲ್ಲಾ ವಕ್ತಾರ ತಳೂರು ಕಿಶೋರ್ಕುಮಾರ್ ಮಾತನಾಡಿ, ‘ಪ್ರತಾಪಸಿಂಹ ಅವರನ್ನೇ ಟೀಕಿಸಿದ್ದ ಲಕ್ಷ್ಮಣ್ ಅವರಿಗೆ ಆಗ ಜಾತಿಪ್ರೇಮ ಎಲ್ಲಿ ಹೋಗಿತ್ತು’ ಎಂದು ಪ್ರಶ್ನಿಸಿದರು.
ಮುಖಂಡರಾದ ಕಾಂಗೀರ ಸತೀಶ್, ಕವನ್ ಕಾವೇರಪ್ಪ, ವಿಜಯ್ ಹಾಗೂ ಬೆಪ್ಪುರನ ಮೇದಪ್ಪ ಭಾಗವಹಿಸಿದ್ದರು.