ಶನಿವಾರಸಂತೆ: ಕೋವಿಡ್-19 ಲಾಕ್ಡೌನ್ನಿಂದ ವರ್ಕ್ಶಾಪ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಮಾಲೀಕರ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಜೀವನ ಸಾಗಿಸಲು ಪರದಾಡುವ ಸ್ಥಿತಿನಿರ್ಮಾಣವಾಗಿದೆ.
ಶನಿವಾರಸಂತೆ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ನೂರು ವರ್ಕ್ಶಾಪ್ಗಳಿವೆ. ಬಾಡಿಗೆ, ವಿದ್ಯುತ್ ಬಿಲ್, ಕಾರ್ಮಿಕರ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಮಾಲೀಕರು ಎದುರಿಸುತ್ತಿದ್ದಾರೆ. ಇದರ ನಡುವೆ ಲಾಕ್ಡೌನ್ ವಿಸ್ತರಣೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
‘ಇನ್ನೇನು ಮುಂಗಾರು ಮಳೆ ಆರಂಭವಾಗುತ್ತಿದೆ. ಕೃಷಿ ಚಟುವಟಿಕೆಗಳು ಆರಂಭವಾದರೆ ಮುಂದಿನ ಸಾಲಿನ ಭತ್ತ ಮತ್ತು ಕಾಫಿ ಕೊಯ್ಲು ಸಮಯ ಬರುವವರೆಗೆ ವರ್ಕ್ಶಾಪ್ನಲ್ಲಿ ಕೆಲಸವಿಲ್ಲದೆ ಇರಬೇಕಾಗುತ್ತದೆ. ಅಲ್ಲಿಯವರೆಗೆ ಜೀವನ ಸಾಗಿಸುವುದು ಹೇಗೆ?. ಎಲ್ಲರಂತೆ ನಮಗೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿದರೆ ಅನುಕೂಲವಾಗುತ್ತದೆ’ ಎಂದು ಶ್ರೀ ಮಂಜುನಾಥ ಎಂಜಿನಿಯರಿಂಗ್ ವರ್ಕ್ಸ್ನ ಮಾಲೀಕ ಎ.ಡಿ.ಮೋಹನ್ ಕುಮಾರ್ ಅಳಲು ತೋಡಿಕೊಂಡರು.
ಲಾಕ್ಡೌನ್ನಿಂದಾಗಿ ವರ್ಕ್ ಶಾಪ್ಗಳು ಬಾಗಿಲು ಮುಚ್ಚಿದ್ದು, ಅಂಗಡಿ ಮುಂದೆ ಕಳೆ ಗಿಡಗಳು ಬೆಳೆದಿವೆ. ಲಾಕ್ಡೌನ್ ವಿಸ್ತರಣೆ ಆಗುತ್ತಲೇ ಇದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿ ಎಂದು ಅವರು ಹೇಳಿದರು.