ಗೋಣಿಕೊಪ್ಪಲು: ತಿತಿಮತಿ ಬಳಿಯ ಮರೂರು ಗಿರಿಜನ ಹಾಡಿಯ ಮುಂದಿನ ಬಾಳೆ ತೋಟವನ್ನು ಕಾಡಾನೆ ಹಿಂಡು ತುಳಿದು ತಿಂದು ನಾಶಪಡಿಸಿವೆ.
ನಾಗರಹೊಳೆ ಅರಣ್ಯದ ಅಂಚಿನಲ್ಲಿರುವ ಮರೂರು ಗಿರಿಜನ ಹಾಡಿಯ ಮನೆ ಮುಂದಿನ ಬಾಳೆ ತೋಟಕ್ಕೆ ಗುರುವಾರ ನಸುಕಿನ ಜಾವದಲ್ಲಿ ನುಗ್ಗಿರುವ ಕಾಡಾನೆ ಹಿಂಡು ಮನ ಬಂದಂತೆ ತುಳಿದಿವೆ. ಆನೆಗಳನ್ನು ಓಡಿಸಲು ಹೋದವರ ಮೇಲೂ ದಾಳಿ ಮಾಡಲು ಮುನ್ನುಗ್ಗಿವೆ. ಇದರಿಂದ ಓಡಿ ಬಂದ ಜನತೆ ಮನೆ ಸೇರಿಕೊಂಡು ಬಚಾವಾಗಿದ್ದಾರೆ.
ಹೆದ್ದಾರಿ ಬದಿಯಲ್ಲಿ ಮರಿ ಆನೆ: ಮತ್ತೊಂದು ಕಡೆ ಇದೇ ಭಾಗದಲ್ಲಿ ಮರಿ ಆನೆಯೊಂದು ತನ್ನ ಮರಿಗೆ ಮೇವು ತಿನ್ನಿಸುತ್ತಾ ತಾನೂ ಮೇವಿನಲ್ಲಿ ನಿರತವಾಗಿದ್ದ ದೃಶ್ಯ ಪ್ರಯಾಣಿಕರಿಗೆ ಖುಷಿ ತಂದಿತು. ನಾಗರಹೊಳೆ ಅರಣ್ಯದ ಆನೆಚೌಕೂರು, ಗೋಣಿಕೊಪ್ಪಲು ನಡುವಿನ ಹೆದ್ದಾರಿ ಮರೂರು ಬಳಿ ಕಾಡಾನೆ ವಾಹನಗಳ ಶಬ್ದಕ್ಕೂ ಹೆದರದೆ ರಸ್ತೆ ಬದಿಯಲ್ಲಿಯೇ ತನ್ನದೇ ಲೋಕದಲ್ಲಿ ಮರಿಯೊಂದಿಗೆ ಮುಳುಗು ಹೋಗಿತ್ತು. ಇದನ್ನು ವಾಹನದಲ್ಲಿ ಸಂಚರಿಸುವ ಪ್ರಯಾಣಿಕರು ನೋಡಿ ಮುದಗೊಂಡರು. ಫೋಟೊ ಸಹ ಕ್ಲಿಕ್ಕಿಸಿಕೊಂಡರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದೆ.
ಮಳೆ: ಆನೆಚೌಕೂರು ಭಾಗದಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಗಿದೆ. ನಾಗರಹೊಳೆ ವನ್ಯಜೀವಿ ವಿಭಾಗದ ಅಳ್ಳೂರು, ಬೂದಿತಿಟ್ಟು, ಸೇರಿದಂತೆ ಅರಣ್ಯದಂಚಿನ ಗ್ರಾಮಗಳಲ್ಲಿಯೂ ಉತ್ತಮ ಮಳೆಯಾಗಿದೆ. ಮತ್ತೊಂದು ಕಡೆ ತಿತಿಮತಿ, ಮಜ್ಜಿಗೆಹಳ್ಳ, ಮರೂರು ಭಾಗದಲ್ಲೂ ಮಳೆ ಸುರಿದಿದೆ.