ಮಡಿಕೇರಿ: ನಗರದಲ್ಲಿ ವಿಜೃಂಭಣೆಯ ಕರಗೋತ್ಸವ ಆರಂಭವಾಯಿತು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಇಲ್ಲಿನ ಪಂಪಿನಕೆರೆಯಲ್ಲಿ ಭಾನುವಾರ ಸಂಜೆ ನಗರದ 4 ಶಕ್ತಿ ದೇವತೆಗಳಾದ ಕೋಟೆ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಮ್ಮ ಅವರ ಕರಗಗಳಿಗೆ ಪೂಜೆ ಸಲ್ಲಿಸಿದ ನಂತರ ಕರಗಧಾರಿಗಳು ನಗರ ಪ್ರದಕ್ಷಿಣೆಗೆ ಹೊರಟರು.
ಪಂಪಿನಕೆರೆಯಿಂದ ಆರಂಭವಾದ ಮೆರವಣಿಗೆ ಬನ್ನಿಮಂಟಪ, ಮಹದೇವಪೇಟೆ ಮುಖ್ಯ ರಸ್ತೆಯಲ್ಲಿ ಸಾಗಲಿದೆ. ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮನೆಗಳ ಮುಂದೆ ರಂಗೋಲಿ ಬಿಡಿಸಿ, ಕರಗವನ್ನು ಜನರು ಸ್ವಾಗತಿಸಿದರು. ಪ್ರತಿ ಮನೆಯವರು ಕರಗಗಳಿಗೆ ಪೂಜೆ ಸಲ್ಲಿಸಿ, ಕಾಣಿಕೆ ಅರ್ಪಿಸಿ ಭಕ್ತಿಭಾವ ಮೆರೆದರು.
ನವರಾತ್ರಿಯ ಅಷ್ಟೂ ದಿನ ಈ 4 ಕರಗಗಳನ್ನು ಹೊತ್ತ ಕರಗಧಾರಿಗಳು ನಗರದ ಆಯ್ದ ಪ್ರಮುಖ ರಸ್ತೆಗಳಲ್ಲಿ ಸಾಂಪ್ರದಾಯಿಕವಾಗಿ ನಿತ್ಯ ಸಂಜೆ ಸಂಚರಿಸಲಿವೆ.