ಮಡಿಕೇರಿ: ಮಳೆಯಿಂದ ಆಗಿರುವ ನಷ್ಟದ ಅಧ್ಯಯನ ನಡೆಸಲು, ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಕೇಂದ್ರ ತಂಡವು ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿದೆ.
ಸೋಮವಾರ ಬೆಂಗಳೂರಿಗೆ ಬಂದಿದ್ದ ಅಧಿಕಾರಿಗಳು, ಅಲ್ಲಿಂದ ಕೊಡಗಿನ ಕುಶಾಲನಗರದ ಕೂಡಿಗೆಯ ಸೈನಿಕ ಶಾಲಾ ಆವರಣದಲ್ಲಿರುವ ಹೆಲಿಪ್ಯಾಡ್ಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದರು.
ಪ್ರತಾಪ್ ಅವರೊಂದಿಗೆ ಅಧಿಕಾರಿಗಳಾದ ಮನೋಜ್ ಕುಮಾರ್ ಹಾಗೂ ಡಾ.ಭಾರ್ತೇಂದು ಕುಮಾರ್ ಸಿಂಗ್ ಇದ್ದಾರೆ.
ಕೂಡಿಗೆ ಸೈನಿಕ ಶಾಲಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಮಳೆ ಹಾನಿಯ ವಿವರ ಪಡೆದುಕೊಂಡ ಬಳಿಕ ಮಡಿಕೇರಿ ತಾಲ್ಲೂಕಿನ ಕಡಗದಾಳು ಬಳಿಯ ಬೊಟ್ಲಪ್ಪ ಪೈಸಾರಿ ಭೂಕುಸಿತ ಪ್ರದೇಶ, ಚೇರಂಗಾಲ ಬಳಿ ಕರಿಮೆಣಸು ತೋಟ ಹಾನಿ, ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ. ಇಡೀ ದಿನ ಜಿಲ್ಲೆಯ ವಿವಿಧ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸುವ ಸಾಧ್ಯತೆಯಿದೆ.
ಆಗಸ್ಟ್ ಮೊದಲ ವಾರದಲ್ಲಿ ಕೊಡಗಿನಲ್ಲಿ ಭಾರಿ ಮಳೆ ಸುರಿದು ಹಾನಿ ಸಂಭವಿಸಿತ್ತು. ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಐವರು ಸಾವನ್ನಪ್ಪಿದ್ದರು. ಚೇರಂಗಾಲ, ಕೋರಂಗಾಲ, ಭಾಗಮಂಡಲ, ನೆಲ್ಯಹುದಿಕೇರಿ, ಭೇತ್ರಿ, ನಾಪೋಕ್ಲು ಭಾಗದಲ್ಲಿ ಬೆಳೆ ನಷ್ಟವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.