ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ ಆಯುಧ ಪೂಜೆಗೆ 53ರ ಸಂಭ್ರಮ

Published 23 ಅಕ್ಟೋಬರ್ 2023, 2:36 IST
Last Updated 23 ಅಕ್ಟೋಬರ್ 2023, 2:36 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸುಂಟಿಕೊಪ್ಪದ ಆಯುಧಪೂಜೆಗೆ 53ರ ಸಂಭ್ರಮ.

ಇಲ್ಲಿನ ವಾಹನ ಚಾಲಕರ ಸಂಘದ ವತಿಯಿಂದ ಕಳೆದ 49 ವರ್ಷಗಳಿಂದ ಒಂದಲ್ಲ ಒಂದು ರೀತಿಯ ವೈಭವತೆಯನ್ನು ಸಾರುತ್ತಿದ್ದ ಆಯುಧ ಪೂಜಾ ಮಹೋತ್ಸವವು ಕೋವಿಡ್‌ನಿಂದ ಕೆಲ ವರ್ಷಗಳ ಕಾಲ ಮಂಕಾಗಿತ್ತು. ಈ ಬಾರಿ 53ನೇ ವರ್ಷದ ಆಯುಧ ಪೂಜಾ ಉತ್ಸವಕ್ಕೆ ಬರದ ಛಾಯೆ ಆವರಿಸಿದೆ. ಹಾಗಾಗಿ, ಹೆಚ್ಚಿನ ಆಡಂಬರವಿಲ್ಲದೇ ಸ್ಥಳೀಯ ನೃತ್ಯ ಕಲಾವಿದರಿಗೆ ಅವಕಾಶ ನೀಡಲು ಸಂಘ ಮುಂದಾಗಿದೆ.

1970ರಿಂದ ಸರಳವಾಗಿ‌ ಆರಂಭಗೊಂಡಿದ್ದ ಈ ಆಯುಧಪೂಜೆ ನಂತರದ ದಿನಗಳಲ್ಲಿ ಮಡಿಕೇರಿ ದಸರಾವನ್ನು ಹೋಲುವಂತೆ ಮಾಡಿತು. 2018 ಮತ್ತು 2019ರಲ್ಲಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮಾತ್ರ ಸ್ಥಳಿಯ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ನಂತರ, ಕೋವಿಡ್‌ ವೇಳೆಯಲ್ಲಿ ಕಚೇರಿ ಪೂಜೆ ಮತ್ತು ಸಾಮೂಹಿಕ ವಾಹನ ಪೂಜೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

ಇದಕ್ಕೂ ಮೊದಲು ಹಲವು ಸಿನಿಮಾ ನಟ- ನಟಿಯರು ಇದರಲ್ಲಿ ಭಾಗಿಯಾಗಿದ್ದರು. ಅಂಬರೀಶ್, ವಿನೋದ್ ರಾಜ್, ಲೀಲಾವತಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ವಿಷ್ಣುವರ್ಧನ್, ಹೆಸರಾಂತ ಗಾಯಕರೂ ಸೇರಿದಂತೆ ಹಲವು ಖ್ಯಾತ ಕಲಾವಿದರು ಈ ವೇದಿಕೆಯಲ್ಲಿ ತಮ್ಮ ಕಲಾ‌ಪ್ರತಿಭೆಯನ್ನು ಅನಾವರಣಗೊಳಿಸಿದ್ದರು.

ವಾಹನಗಳು, ಮಕ್ಕಳು, ಕಚೇರಿಗಳು, ಅಂಗಡಿಗಳು, ವರ್ಕ್‌ಶಾಪ್‌ಗಳು ಹಾಗೂ ಮಂಟಪಗಳ ಅಲಂಕಾರ ಸ್ಪರ್ಧೆಗಳು ನಡೆಯುತ್ತಿದ್ದವು. ಆಕರ್ಷಕವಾದ ನಗದು ಮತ್ತು ಬಹುಮಾನಕ್ಕಾಗಿ ಕೊಡಗಿನ ಮೂಲೆಮೂಲೆಗಳಿಂದ‌ ಆಗಮಿಸಿದ್ದ ವಾಹನಗಳು ತಮ್ಮ ಆಕರ್ಷಕ ಮಂಟಪಗಳ ಸ್ಪರ್ಧೆಗೆ ಪೈಪೋಟಿ ನಡೆಸಿದ್ದು ಕೂಡ ಒಂದು ಇತಿಹಾಸ.

ಈ ಹಿಂದಿನ ಸಂಘದ ಹಿರಿಯರು ಹಾಕಿಕೊಟ್ಟ ಅಡಿಪಾಯವನ್ನು ಮುಂದುವರೆಸಿಕೊಂಡ ಬಂದ ಸಂಘದ ಸದಸ್ಯರು ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಒತ್ತು ನೀಡಲು ಪ್ರಯತ್ನಿಸಿದ್ದರು.

ಮಡಿಕೇರಿ ದಸರಾವನ್ನು ಹೋಲುವ ರೀತಿಯಲ್ಲಿ ಆಕರ್ಷಕವಾದ ಚಲನವಲನಗಳ ಒಳಗೊಂಡ ಸ್ತಬ್ದಚಿತ್ರಗಳು ನಂತರ ದಿನದಲ್ಲಿ ಜನಾಕರ್ಷಣೆಗೊಂಡವು.

ಸುಂಟಿಕೊಪ್ಪ ಮಾರುಕಟ್ಟೆ ರಸ್ತೆಯ ಗೆಳೆಯರ ಬಳಗ ಮತ್ತು ಕೆದಕಲ್‌ನ ಫ್ರೆಂಡ್ಸ್ ಕ್ಲಬ್‌ನ ಸದಸ್ಯರು ಸಾರ್ವಜನಿಕರಿಂದ ಮತ್ತು ದಾನಿಗಳ ಸಹಕಾರದಿಂದ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಸ್ಪರ್ಧೆಗೆ ಇಳಿಸುವ ಮೂಲಕ‌ ಸುಂಟಿಕೊಪ್ಪದ ಆಯುಧ ಪೂಜಾ ಮಹೋತ್ಸವಕ್ಕೆ ಮತ್ತಷ್ಟು ಬಲ ತುಂಬಿತ್ತು. ಈ ಸ್ತಬ್ದ ಚಿತ್ರಗಳನ್ನು ವೀಕ್ಷಿಸಲು ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ಪ್ರವಾಸಿಗರ ದಂಡು ಆಗಮಿಸಿ ಈ ಮನರಂಜನೆಯನ್ನು ಆಸ್ವಾದಿಸಲು ಪ್ರಾರಂಭಿಸಿದರು. ಆದರೆ, ನಂತರ ಪ್ರಕೃತಿ ವಿಕೋಪದಿಂದ ಈ ಸ್ಪರ್ಧೆಗೂ ಕೂಡ ಅವಕಾಶ ಇಲ್ಲದಂತಾಯಿತು.

ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳು ಭಾಷಣದಲ್ಲಿ ಮಾತ್ರ ಸರ್ಕಾರದ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿ ಹೊರಟು ಹೋದ ನಂತರ ಆ ಭರವಸೆ ಇದುವರೆಗೂ‌ ಕೂಡ ಭರವಸೆಯಾಗಿಯೇ ಉಳಿದಿದೆ.

ಆದರೂ ತಮ್ಮ ಹಿರಿಯರು ಹಾಕಿಕೊಟ್ಟ ಈ ಆಯುಧಪೂಜೆಗೆ ಧಕ್ಕೆಯಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರದ ಅನುದಾನದ ಬಗ್ಗೆ ಯೋಚಿಸದೇ ತಮ್ಮಷ್ಟಕ್ಕೆ ತಾವೇ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಯುಧಪೂಜಾ‌ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

‘ಸುಂಟಿಕೊಪ್ಪದ ಆಯುಧಪೂಜೆಗೆ ತನ್ನದೇ‌ ಆದ ಪ್ರಾಮುಖ್ಯತೆ ಇದೆ. ಆದರೆ, 53ನೇ ವರ್ಷದ ಆಯುಧಪೂಜೆಗೆ ಬರಗಾಲ‌ ಒಂದು ರೀತಿಯ‌ ಕಪ್ಪು ಛಾಯೆಯನ್ನೇ ಮೂಡಿಸಿದೆ. ಆದರೂ‌‌, ಸಂಭ್ರಮಕ್ಕೆ ಧಕ್ಕೆಯಾಗದಂತೆ ಸ್ಥಳೀಯ ಮಕ್ಕಳಿಗೆ ನೃತ್ಯ‌ ಸ್ಪರ್ಧೆಗೆ ಅವಕಾಶ ನೀಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಸ್.ಸುರೇಶ್ ಹೇಳಿದರು.

ಈ ಬಾರಿಯಾದರೂ ಸಂಭ್ರಮದ ಆಚರಣೆಗೆ ಒತ್ತು‌‌ ನೀಡಬೇಕು ಎಂದು ಭಾವಿಸಿದ್ದೇವು. ಆದರೆ, ಕೋವಿಡ್ ನಂತರ ಇದೀಗ ಸರ್ಕಾರ ಕೊಡಗನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದ್ದರಿಂದ ಸರಳತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಗೌರವಾಧ್ಯಕ್ಷ ಬಿ.ಎಂ.ಪೂವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಂಟಿಕೊಪ್ಪದ ಅಂಗಡಿ ಮಾಲೀಕರು ವಿದ್ಯುತ್ ಅಲಂಕಾರ ಮಾಡಿದರೆ ಆಯುಧಪೂಜೆಗೆ ಕಳೆ ಬಂದಂತಾಗುತ್ತದೆ ಎಲ್ಲರೂ ಸಹಕರಿಸಿ ಎಂದು‌ ಸಂಘದ ಗೌರವಾಧ್ಯಕ್ಷ ಹಂಸ (ಅಚ್ಚುಪ್ಪ) ಮನವಿ ಮಾಡಿಕೊಂಡರು.

ಸುಂಟಿಕೊಪ್ಪ ವಾಹನ ಚಾಲಕರ ಸಂಘದ 53ನೇ ವರ್ಣದ ಆಯುಧ ಪೂಜಾ ಸಮಾರಂಭಕ್ಕೆ‌ ಅಲಂಕೃತಗೊಂಡ ವೇದಿಕೆ.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ 53ನೇ ವರ್ಣದ ಆಯುಧ ಪೂಜಾ ಸಮಾರಂಭಕ್ಕೆ‌ ಅಲಂಕೃತಗೊಂಡ ವೇದಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT