ನಾಪೋಕ್ಲು: ಬಿರು ಬಿಸಿಲನ್ನೂ ಲೆಕ್ಕಿಸದೇ ಕಿಕ್ಕಿರಿದಿದ್ದ ಕ್ರೀಡಾಭಿಮಾನಿಗಳ ಉದ್ಘೋಷ ಹಾಗೂ ಕೊನೆ ಕ್ಷಣದವರೆಗೂ ಫಲಿತಾಂಶಕ್ಕಾಗಿ ಸೃಷ್ಟಿಯಾಗಿದ್ದ ಕಾತರದ ಮಧ್ಯೆ ಚೇಂದಂಡ ತಂಡ 24ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಕುಂಡ್ಯೋಳಂಡ ಕಪ್ ಜಯಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ರೋಚಕ ಹಣಾಹಣಿಯಲ್ಲಿ ಕೂದಲೆಳೆಯ ಅಂತರದಲ್ಲಿ ಸೋಲುಂಡ ನೆಲ್ಲಮಕ್ಕಡ ತಂಡವು 2ನೇ ಸ್ಥಾನ ಪಡೆಯಿತು. ಕುಲ್ಲೇಟಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಕ್ರಮವಾಗಿ 3 ಮತ್ತು 4ನೇ ಸ್ಥಾನವನ್ನು ಅಲಂಕರಿಸಿದವು. ಈ ಮೂಲಕ ಇಲ್ಲಿ ಕಳೆದ 30 ದಿನಗಳಿಂದ ನಡೆಯುತ್ತಿದ್ದ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಸಂಭ್ರಮದ ಹಾಗೂ ಅದ್ದೂರಿಯ ತೆರೆಯೂ ಬಿತ್ತು.
ಗಿನ್ನಿಸ್ ದಾಖಲೆಯ ಪುಟಗಳಿಗೆ ಟೂರ್ನಿ ಸೇರಿದ್ದು ಈ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು. ಸೇರಿದ್ದ ಸುಮಾರು 30 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಭಾರಿ ಕರತಾಡನ, ಮೆಚ್ಚುಗೆಯ ಮಾತುಗಳು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದವು. ಈ ಎಲ್ಲ ದೃಶ್ಯಗಳಿಗೆ ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಭಾನುವಾರ ಸಾಕ್ಷಿಯಾಯಿತು.
ಅಂತಿಮ ಪಂದ್ಯದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ‘ಹಾಕಿ ಅಕಾಡೆಮಿಗೆ ತೋರದಲ್ಲಿ 5 ಎಕರೆ ಜಾಗವನ್ನು ನೀಡುವ ವ್ಯವಸ್ಥೆ ಆಗುತ್ತಿದೆ’ ಎಂದು ಹೇಳಿದರು.
ಕ್ರೀಡೆ ಇಲ್ಲದ ಕೊಡಗು ಇಲ್ಲ. ಕ್ರೀಡೆಯನ್ನು ಉತ್ತೇಜಿಸಲು ರಾಜಕೀಯವಾಗಿ, ಆರ್ಥಿಕವಾಗಿ ಎಲ್ಲರೂ ಕೈಜೋಡಿಸಬೇಕು. ಯಾವುದೇ ಕ್ರೀಡೆ ಆಗಲಿ ಪ್ರೋತ್ಸಾಹ ಅಗತ್ಯ. ಮಕ್ಕಳ ಪ್ರತಿಭೆಗೆ ಅವಕಾಶ ಸಿಗುವಂತಾಗಬೇಕು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೌಟುಂಬಿಕ ಹಾಕಿ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳಬೇಕು ಎಂದರು.
ಐಆರ್ಎಸ್ ಜಾರಿ ನಿರ್ದೇಶನಾಲಯದ ಉಪನಿರ್ದೇಶಕ ಡಾ.ಕೊಟ್ಟಂಗಡ ಪೆಮ್ಮಯ್ಯ ಮಾತನಾಡಿ, ‘ಕೊಡವರ ಒಗ್ಗಟು ಪರಿಶ್ರಮದ ಫಲ ಈ ಕ್ರೀಡಾಕೂಟ. ಕೊಡವ ಜನಾಂಗದವರ ಆರೋಗ್ಯ ದೈಹಿಕ ಕ್ಷಮತೆ ಕ್ಷೀಣಿಸುತ್ತಿದ್ದು, ಪ್ರತಿಯೊಬ್ಬರೂ ಆರೋಗ್ಯ ವೃದ್ಧಿಯತ್ತ ಗಮನಹರಿಸಬೇಕು ಎಂದರು.
ಹಾಕಿ ಟೂರ್ನಿಯ ಸಂಚಾಲಕ ದಿನೇಶ್ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕ್ಯಾರಿಯರ್ ಗೈಡೆನ್ಸ್, ಆಹಾರ ಮೇಳ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಕೌಟುಂಬಿಕ ಮ್ಯಾರಥಾನ್, ಬೊಳಕಾಟ್ ತರಬೇತಿ, ಸಾಧಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ’ ಎಂದರು.
ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ.ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ₹ 5 ಲಕ್ಷ ಮೊತ್ತದ ಚೆಕ್ ಅನ್ನು ಹಾಕಿ ಅಕಾಡೆಮಿಗೆ ಹಸ್ತಾಂತರಿಸಿದರು. ಲೇಖಕ ಅಲ್ಲಾರಂಡ ವಿಠಲ್ ನಂಜಪ್ಪ ಅವರು ಕುಂಡ್ಯೋಳಂಡ ಕುಟುಂಬದ ಕುರಿತು ಬರೆದ ಪುಸ್ತಕವನ್ನು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು.
ಕೊಡವ ಹಾಕಿ ಅಕಾಡೆಮಿಗೆ 5 ಎಕರೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಹಾಗೂ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕುಂಡ್ಯೋಳಂಡ ಕುಟುಂಬಸ್ಥರಿಗೆ ಒಡಿಕತ್ತಿಯನ್ನು ನೀಡುವುದರ ಮೂಲಕ ಹಾಕಿ ಅಕಾಡೆಮಿಯಿಂದ ಗೌರವ ಸಲ್ಲಿಸಲಾಯಿತು.
360 ಕುಟುಂಬಗಳ 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಪಾಲ್ಗೊಳ್ಳುವ ಮೂಲಕ ದಾಖಲೆ ಮಾಡಿದ ಕುಂಡ್ಯೋಳಂಡ ಹಾಕಿ ಪಂದ್ಯಾವಳಿಯನ್ನು ಅಧಿಕೃತವಾಗಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲಾಗಿದೆ ಎಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಮಿತಿ ಸದಸ್ಯ ಸ್ವಪ್ನಿಲ್ ಸಭೆಯಲ್ಲಿ ಘೋಷಿಸಿ, ಪ್ರಮಾಣ ಪತ್ರವನ್ನು ಕುಂಡ್ಯೋಳಂಡ ಕುಟುಂಬಕ್ಕೆ ಹಸ್ತಾಂತರಿಸಿದರು.
ಕೊಡವ ಕೌಟುಂಬಿಕ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೇಲೇಟಿರ ಕುಟುಂಬ ಪ್ರಥಮ, ಮುಕ್ಕಾಟಿರ (ಹರಿಹರ) ದ್ವಿತೀಯ ಸ್ಥಾನ ಹಾಗೂ ಚೀಯಕಪೂವಂಡ ಕುಟುಂಬ ತೃತೀಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಕ್ರಮವಾಗಿ ₹ 30 ಸಾವಿರ, ₹ 20 ಸಾವಿರ ಹಾಗೂ ₹ 10 ಸಾವಿರ ನಗದು ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಹೈದರಾಬಾದ್ ವಿದೇಶಿ ತನಿಖಾ ಘಟಕದ ಉಪನಿರ್ದೇಶಕ ಮುಕ್ಕಾಟಿರ ಪುನೀತ್ ಕುಟ್ಟಯ್ಯ, ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಪುಚ್ಚಿಮಾಡ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟರಾಜ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.