ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿಸಿ ದರವನ್ನೇ ಕಾಯುತ್ತಿದ್ದ ಕೊಡಗಿನ ಕಾಫಿ ಬೆಳೆಗಾರರು

ಉದ್ಯಮಿ ವಿ.ಜಿ. ಸಿದ್ಧಾರ್ಥ ಸಾವು: ಬೆಳೆಗಾರರಲ್ಲಿ ನೋವು
Last Updated 31 ಜುಲೈ 2019, 20:01 IST
ಅಕ್ಷರ ಗಾತ್ರ

ಮಡಿಕೇರಿ: ‘ಕೆಫೆ ಕಾಫಿ ಡೇ’ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಅವರ ಸಾವು, ಕಾಫಿನಾಡು ಕೊಡಗಿನ ಬೆಳೆಗಾರರಿಗೂ ನೋವು,ಕಣ್ಣೀರು ತರಿಸಿದೆ. ಜಿಲ್ಲೆಯ ಬಹುತೇಕ ಕಾಫಿ ಎಸ್ಟೇಟ್‌ಗಳಲ್ಲಿ ಬುಧವಾರ ಕೆಲಸ ಸ್ಥಗಿತಗೊಳಿಸಿ, ಕಂಬನಿ ಮಿಡಿದರು.

ಮಡಿಕೇರಿಯಲ್ಲೂ ‘ಕೆಫೆ ಕಾಫಿ ಡೇ’ ಇದ್ದು, ಅದರಲ್ಲಿ ಕೊಡಗಿನ ಕಾಫಿಯ ರುಚಿ ಪರಿಚಯಿಸುವ ಕೆಲಸ ನಡೆಯುತ್ತಿದೆ. ದೇಶ–ವಿದೇಶದಿಂದ ಮಡಿಕೇರಿಗೆ ಬರುವ ಪ್ರವಾಸಿಗರಿಗೆ ಅಲ್ಲಿ ಕೊಡಗಿನದ್ದೇ ಕಾಫಿ ಲಭ್ಯವಿರುತ್ತದೆ. ಇದರಿಂದ ಬೆಳೆಗಾರರಿಗೂ ನೆರವಾಗುತ್ತಿತ್ತು. ಅಲ್ಲಿ ಕಾಫಿ ಕುಡಿದ ನಂತರ ರುಚಿಗೆ ಮಾರು ಹೋಗಿ ಅದೆಷ್ಟೋ ಮಂದಿ ಮಡಿಕೇರಿಯ ಕ್ಯೂರಿಂಗ್‌ಗಳಲ್ಲಿ ಕಾಫಿ ಪೌಡರ್‌ ಖರೀದಿಸುವುದರಿಂದ ಇದು ತಮ್ಮ ಜೇಬು ತುಂಬಲೂ ಕಾರಣವಾಗಿತ್ತು ಎಂದು ಬೆಳೆಗಾರರು ಸ್ಮರಿಸುತ್ತಾರೆ.

ಎಬಿಸಿ ದರದ ಮೇಲೆಯೇ ನಿರ್ಧಾರ: ಕೊಡಗಿನಲ್ಲಿ ಪ್ರಮುಖ ವಾಣಿಜ್ಯ ಬೆಳೆ ಕಾಫಿ. ಇಲ್ಲಿ ಎಬಿಸಿ (ಅಮಾಲ್ಗಮೇಟೆಡ್‌ ಬೀನ್‌ ಕಾಫಿ) ಸ್ಥಾಪಿಸದಿದ್ದರೂ ಆ ಕಂಪನಿ ಪ್ರತಿನಿತ್ಯ ಪ್ರಕಟಿಸುತ್ತಿದ್ದ ದರದ ಮೇಲೆಯೇ ಕಾಫಿಗೆ ಮಾರುಕಟ್ಟೆಯ ದರ ನಿಗದಿಯಾಗುತ್ತದೆ.

‘ಕಾಫಿ ಕೊಯ್ಲು ಮುಕ್ತಾಯವಾದ ನಂತರ ನಿತ್ಯವೂ ಜಿಲ್ಲೆಯ ಬೆಳೆಗಾರರು ಎಬಿಸಿ ದರವನ್ನೇ ಎದುರು ನೋಡುತ್ತಾರೆ. ನಿತ್ಯ ಬೆಳಿಗ್ಗೆ ಎಬಿಸಿ ದರ ಪ್ರಕಟಿಸಿದ ನಂತರವೇ ಬೇರೆ ಬೇರೆ ಕ್ಯೂರಿಂಗ್‌ಗಳೂ ದರ ಪ್ರಕಟಿಸುತ್ತಿದ್ದವು. ಎಬಿಸಿ ಹೆಚ್ಚಿನ ದರ ಪ್ರಕಟಿಸಿದರೆ ಅಂದು ಬೆಳೆಗಾರರಿಗೆ ಹಬ್ಬ’ ಎನ್ನುತ್ತಾರೆ ಕಾಫಿ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್‌.

‘ಕಾಫಿ ಬೆಳೆ ಹಾಗೂ ಬೆಳೆಗಾರರು ಉಳಿಯಬೇಕೆಂದರೆ ಅದರ ಪೂರಕ ಉದ್ದಿಮೆಗಳು ಗಟ್ಟಿಯಾಗಬೇಕು. ಸಿದ್ಧಾರ್ಥ ಅವರ ಸಾವು ಬೆಳೆಗಾರರಿಗೂ ನಷ್ಟ ತಂದಿದೆ’ ಎಂದು ಅವರು ನೋವು ವ್ಯಕ್ತಪಡಿಸಿದರು.

‘1998–99ರ ನಂತರ ಕಾಫಿ ಧಾರಣೆಯುಲ್ಲಿ ದಿಢೀರ್‌ ಚೇತರಿಕೆ ಕಂಡಿತ್ತು. ದೊಡ್ಡ ಮೊತ್ತಕ್ಕೆ ಕಾಫಿ ಮಾರಾಟ ಮಾಡಲು ಸಾಧ್ಯವೆಂಬುದು ಬೆಳೆಗಾರರ ಅರಿವಿಗೆ ಬಂತು. ಬೆಲೆ ಹೆಚ್ಚಾದಂತೆ ಕಾಫಿ ಬೆಳೆಯುವ ಕ್ಷೇತ್ರವೂ ವಿಸ್ತಾರವಾಗುತ್ತಲೇ ಸಾಗಿತು. ಸಿದ್ಧಾರ್ಥ ಅವರು ಸ್ಥಾಪಿಸಿದ್ದ ಕಾಫಿ ಸಂಬಂಧಿಸಿದ ಉದ್ದಿಮೆಗಳು ನೇರ ಅಲ್ಲದಿದ್ದರೂ ಪರೋಕ್ಷವಾಗಿ ಬೆಳೆಗಾರರ ಕೈಹಿಡಿಯುತ್ತಿದ್ದವು’ ಎಂದು ಬೆಳೆಗಾರ ನಾಣಯ್ಯ ನೆನಪಿಸಿಕೊಂಡರು.

‘ಕಾಫಿ ಧಾರಣೆ ವ್ಯತ್ಯಾಸವಾದರೆ ಎಬಿಸಿ ಕ್ಯೂರಿಂಗ್‌ಗಳಲ್ಲಿ ಕಾಫಿಯನ್ನು ದಾಸ್ತಾನು ಮಾಡಿ ಮುಂಗಡವಾಗಿ ಹಣ ಪಡೆಯುವ ಸೌಲಭ್ಯವಿತ್ತು. ಉತ್ತಮ ದರ ಬಂದಾಗ ಅಂತಿಮವಾಗಿ ಬಿಲ್‌ ಹಾಕಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಇದೇ ಎಬಿಸಿ. ಈ ನಿಯಮದಿಂದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರಿನ ಬೆಳೆಗಾರರು ನೆಮ್ಮದಿಯಿಂದ ಬದುಕುತ್ತಿದ್ದರು’ ಎಂಬುದು ಕಾಫಿ ಬೆಳೆಗಾರರ ಒಕ್ಕೂಟದ ಸದಸ್ಯರ ಅಭಿಪ್ರಾಯ.

‘ಕೊಡಗಿನಲ್ಲಿ ಅಂದಾಜು 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆಯಿದೆ. ಸಿದ್ಧಾರ್ಥ ಅವರು ಸ್ಥಾಪಿಸಿದ್ದ ಕಾಫಿ ಉದ್ದಿಮೆಗಳು ಒಂದಲ್ಲಾ ಒಂದು ರೀತಿಯಲ್ಲಿ ಕೊಡಗಿನ ಬೆಳೆಗಾರರ ನೆರವಿಗೂ ಬರುತ್ತಿದ್ದವು’ ಎಂದು ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ನಂದ ಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT