ಬಂಗಾರಪೇಟೆ: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಧೃವೀಕರಣ ಆರಂಭವಾಗಿದೆ. ಬಿಜೆಪಿಯ ನೂರಾರು ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ಮುಖಂಡರು, ಯುವಕರು ಹಾಗೂ ಹಲ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದ ವೇಳೆ ಮಾತನಾಡಿದರು.
ಗ್ರಾಮ ಪಂಚಾಯಿತಿ ಚುನಾವಣೆ ಶೀಘ್ರ ನಡೆಯಲಿದೆ. ಕೆಸರನಹಳ್ಳಿ ಪಂಚಾಯಿತಿ ಹಲ ದಶಕಗಳಿಂದ ಬಿಜೆಪಿ ವಶದಲ್ಲಿದ್ದು, ಈಗ ಆ ಪಂಚಾಯಿತಿಯ ಬಹುತೇಕ ಮುಖಂಡರು ಕಾಂಗ್ರೆಸ್ ಕದತಟ್ಟಿರುವುದು ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ ಎಂದರು.
ಅಲ್ಲದೆ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮುಖಂಡರ ಕೊರತೆ ಎದ್ದುಕಾಣುತ್ತಿದೆ. ಕಾರ್ಯಕರ್ತರು ವಿಧಿಯಿಲ್ಲದೆ ಅನ್ಯ ಪಕ್ಷಗಳತ್ತ ಮುಖ ಮಾಡುವಂತಾಗಿದೆ. ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಸಾಧನೆ ಸಹ ಶೂನ್ಯವಾಗಿದೆ ಎಂದರು.
ಕೆಸರನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ರಾಮದೇವ್ ಮತ್ತು ರೆಡ್ಡಿಹಳ್ಳಿಯ ಎನ್.ಡಿ.ಗಂಗಾಧರಪ್ಪ, ಶ್ರೀರಾಮ್, ವೆಂಕಟೇಶ್, ಮಧು, ಮುನಿಸ್ವಾಮಿ ಸೀನಾ, ಚಲಪತಿ, ಸುರೇಶ್, ನಾರಾಯಣಪ್ಪ, ಬಾಬು, ಮಾರುತಿ, ಸುಬ್ಬು ನೇತೃತ್ವದಲ್ಲಿ ಹಲ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು.
ಮುಖಂಡರಾದ ದೇಶಿಹಳ್ಳಿ ವೆಂಕಟರಾಮ್, ಆರೋಕ್ಯರಾಜನ್, ಕಪಾಲಿ ಶಂಕರ್ ಭಾಗವಹಿಸಿದ್ದರು.