ಮುಳಬಾಗಿಲು: ಲಾಕ್ಡೌನ್ ಸಮಯದಲ್ಲಿ ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು, ಪುಂಗನೂರು ಹಾಗೂ ಚಿತ್ತೂರಿನಿಂದ ನಗರಕ್ಕೆ ಥಾಟ್ನಿಂಗ್(ತಾಳೆ ಕಾಯಿ) ಬಂದಿಳಿಯುತ್ತಿದೆ. ಎಳೆ ಕೊಬ್ಬರಿ ರುಚಿಯ ಥಾಟ್ನಿಂಗ್ ಅನ್ನು ಹೆಚ್ಚು ಉಷ್ಣಾಂಶವುಳ್ಳ ಪ್ರದೇಶವಾದ ಚಿತ್ತೂರು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ.
ಇಲ್ಲಿ ತೆಂಗಿನ ಕಾಯಿ ಮರಗಳಿದ್ದಂತೆ ಅಲ್ಲಿ ತಾಳೆ(ಥಾಟ್ನಿಂಗ್) ಮರಗಳನ್ನು ಬೆಳೆಸಲಾಗಿದೆ. ಹಣ್ಣು, ತರಕಾರಿ ವಾಹನಗಳಿಗೆ ಜಿಲ್ಲೆಯ ಗಡಿ ಪ್ರದೇಶ ಪ್ರವೇಶಿಸಲು ಹೆಚ್ಚಿನ ಅಡ್ಡಿ, ಆತಂಕವಿಲ್ಲ. ಹಾಗಾಗಿ, ಸೊಪ್ಪು ಹಾಗೂ ಇತರೆ ತರಕಾರಿ ಬೆಳೆಯೊಂದಿಗೆ ಸುಮಾರು ಹತ್ತಕ್ಕೂ ಹೆಚ್ಚು ಮಹಿಳೆಯರು ಥಾಟ್ನಿಂಗ್ನೊಂದಿಗೆ ಮೊದಲು ಹೊರವಲಯದಲ್ಲಿ ವಾಹನಗಳಲ್ಲಿ ಬಂದಿಳಿಯುತ್ತಾರೆ. ಒಬ್ಬರೊಂದು ಹಾದಿ ಹಿಡಿದು ಸಂಜೆಯೊಳಗೆ ತಾವು ತಂದ ಮಾಲು ಮಾರಾಟ ಮಾಡಿ ಸಂಜೆ ತಾವು ಬಂದ ವಾಹನದಲ್ಲಿಯೇ ವಾಪಸ್ ಹೋಗುತ್ತಾರೆ.
‘ಮಕ್ಕರಿಗಳಲ್ಲಿ ಥಾಟ್ನಿಂಗ್ ತಂದು ಡಜನ್ಗೆ ₹ 50ಕ್ಕೆ ಮಾರಾಟ ಮಾಡಲಾಗುತ್ತದೆ. ₹ 1,500ರಿಂದ ₹ 1,800 ಸಿಕ್ಕರೆ ತಾವು ಖರೀದಿಸಿದ ಬೆಲೆ, ಕೂಲಿ, ಸಾಗಣೆ ವೆಚ್ಚ ಎಲ್ಲಾ ಹೋಗಿ ₹ 500 ಸಿಗುತ್ತದೆ’ ಎನ್ನುತ್ತಾರೆ ಪಲಮನೇರು ಪಟ್ಟಣದ ಲಕ್ಷ್ಮಿದೇವಮ್ಮ.
ಮುಳಬಾಗಿಲುನಲ್ಲಿ ತಮಗೆ ಬೇರೆ ಕಡೆ ಬಂದ ಭಾವನೆ ಇರುವುದಿಲ್ಲ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆಲುಗು ಭಾಷೆಯಲ್ಲಿಯೇ ವ್ಯವಹಾರ ಮಾಡುವ ಕಾರಣ ತಮ್ಮ ಪಟ್ಟಣದಲ್ಲಿಯೇ ಇದ್ದಂತೆ ಭಾಸವಾಗುತ್ತದೆ.ಅದರೊಂದಿಗೆ ಹೆಚ್ಚಿನ ಜನ ತಾವು ನೆರೆಯ ರಾಜ್ಯದಿಂದ ಬಂದಿರುವುದಾಗಿ ತಿಳಿಸಿದರೆ ಚೌಕಾಸಿ ಮಾಡಲು ಮುಂದಾಗುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.