ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಮಾರುಕಟ್ಟೆ ವ್ಯವಸ್ಥೆ ಜಾರಿಯಾಗಬೇಕು

Last Updated 17 ಜನವರಿ 2020, 11:02 IST
ಅಕ್ಷರ ಗಾತ್ರ

ಕೋಲಾರ: ‘ಸಹಕಾರ ಸಂಘಗಳ ಮೂಲಕವೇ ರೈತ ಉತ್ಪಾದನೆಯನ್ನು ಖರೀದಿ ಮಾಡಿದಾಗ ರೈತರ ಆರ್ಥಿಕ ಅಭಿವೃದ್ಧಿ ಸಹಕಾರಿಯಾಗುತ್ತದೆ’ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಶಿವನಂಜಯ್ಯ ಬಾಳೇಕಾಯಿ ಅಭಿಪ್ರಾಯಪಟ್ಟರು.

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಮತ್ತು ಪರಿಸರದ ಪ್ರಶ್ನೆಗಳು ಕುರಿತು ನಡೆದ ಗೋಷ್ಠಿಯಲ್ಲಿ ರೈತ ಆದಾಯ ಮತ್ತು ನಿಸರ್ಗದ ಉಳಿವಿಗಾಗಿ ಮಿಶ್ರ ಬೆಳೆಗಳು ವಿಚಾರ ಮಂಡಿಸಿ ಮಾತನಾಡಿದರು.

‘ನಮ್ಮನಾಳುವ ಸರ್ಕಾರಗಳು ರೈತ ಉತ್ಪಾದನೆಗೆ ವೆಚ್ಚ ಕಟ್ಟುತ್ತವೆ, ಆದರೆ ಉತ್ಪಾದನೆಗೆ ಅಗುವ ವೆಚ್ಚಕ್ಕೆ ಬೆಲೆ ಕಟ್ಟುವುದಿಲ್ಲ. ಮಾರುಕಟ್ಟೆ ವ್ಯವಸ್ಥೆ ಸರಿ ಹೋಗದಿದ್ದರೆ ರೈತ ಉದ್ಧಾರವಾಗಲು ಸಾಧ್ಯವಿಲ್ಲ. ರೈತರ ಅಭಿವೃದ್ಧಿಗೆ ಪೂರಕವಾಗಿ ರೈತ ಸಹಕಾರ ಸಂಘಗಳ ಮಾರುಕಟ್ಟೆ ವ್ಯವಸ್ಥೆ ಸ್ಥಾಪನೆಯಾಗಬೇಕು’ ಎಂದರು.

‘ಜಿಲ್ಲೆಯ ರೈತರೆಲ್ಲ ರಾಗಿ ಹೊಲದಲ್ಲಿ ಜೀವನ ನಡೆಸುವಂತಹವರು, ಪರಿಚಯವಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ರೈತನ ಬದುಕು ಹಸನಾಗಲು ಸಾಧ್ಯವಾಗುತ್ತಿಲ್ಲ. ಸವಯಾವ ಪದ್ದತಿಗೂ, ರಾಸಾಯನಿಕ ಪದ್ದತಿಗೂ ತುಂಬ ವ್ಯತ್ಯಾಸವಿದೆ. ಇದರಿಂದ ಸವಯಾವ ಪದ್ದತಿ ಅಳವಡಿಕೆ ಮೂಲಕ ಮಿಶ್ರ ಬೆಳೆ ಪದ್ದತಿಗೆ ರೈತರು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ನೀರು ಗಂಟಿಗರಾಗಬೇಕು: ಕೋಲಾರದ ಜಲದ ಕಣ್ಣು ನಿರ್ವಹಣೆ – ಜನರ ಪಾತ್ರ ಕುರಿತು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ವಿಷಯ ಮಂಡಿಸಿ ಮಾತನಾಡಿ, ‘ನೀರಿಗಾಗಿ ಉದ್ಧ ಸಂಭವಿಸುವ ದಿನಗಳು ದೂರವಿಲ್ಲ, ಇದಕ್ಕಾಗಿ ಮನೆಗೊಬ್ಬರು ನೀರುಗಂಟಿಗರು ಹುಟ್ಟಿಕೊಂಡಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಲು ಕಾರಣವೇನು ಎಂಬುದು ಸರ್ಕಾರಗಳಿಗೆ ಗೊತ್ತಿದ್ದರು ಮೌನವಹಿಸುತ್ತಿವೆ. ನಾವು ವಿವಿಧೆಡೆ ಕೆರೆಗಳಲ್ಲಿ ಊಳು ತೆಗೆಯಲು ಹೋದಾಗ ರಾಜಕೀಯ ವ್ಯಕ್ತಿಗಳು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಅವರೆಲ್ಲ ಕೆರೆ, ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವವರೇ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ 2000ಕ್ಕೂ ಹೆಚ್ಚು ಕೆರೆಗಳಿವೆ. ಇಲ್ಲಿ ಸರಾಸರಿ 570 ಎಂಎಂ ಮಳೆಯಾಗುತ್ತಿದೆ. ಜಲ ಮೂಲಗಳ ನಾಶದಿಂದಲೇ ನೀರನ್ನು ಸಂಗ್ರಹಿಸಿಕೊಳ್ಳಲಾಗುತ್ತಿಲ್ಲ. ಕೆರೆಗಳಿಗೆ ನೀರು ಬರಲು ಅವಕಾಶ ಮಾಡಿಕೊಟ್ಟರೆ ಆ ಗಂಗಾದೇವಿಯೇ ತನ್ನ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ’ ಎಂದರು.

‘ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದರೆ ಮಾದರಿ ಜಿಲ್ಲೆಯನ್ನಾಗಿ ನಿರ್ಮಾಣ ಮಾಡಬಹುದಿತ್ತು, ಆದರೆ ಉಳ್ಳವರ ಯೋಜನೆಯಾಗಿದ್ದು, ಕೂಲಿ ಕಾರ್ಮಿಕರು ವಂಚನೆಗೆ ಒಳಗಾಗಿದ್ದಾರೆ. ಈ ಯೋಜನೆಯಿಂದ ಕೆಲಸ ಅಗದಿದ್ದರು ಸುಮಾರು ಕೋಟಿಗಳಷ್ಟು ದುರುಪಯೋಗ ಅಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.ಸಮ್ಮೇಳನಾಧ್ಯಕ್ಷ ಸಿ.ಎಂ.ಗೋವಿಂದರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT