ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಬಿಲ್ ಪಾವತಿಗೆ ಸರ್ಕಾರದ ಮೀನಮೇಷ: ಚಾತಕ ಪಕ್ಷಿಯಂತೆ ಕಾಯುತ್ತಿರುವ ಅನ್ನದಾತರು

ಬೆಂಬಲ ಬೆಲೆ ಯೋಜನೆ
Last Updated 17 ಜೂನ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ್ದ ಜಿಲ್ಲೆಯ ರೈತರು ಹಣಕ್ಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಸರ್ಕಾರ ರಾಗಿ ಬಿಲ್‌ ಪಾವತಿಗೆ ಮೀನಮೇಷ ಎಣಿಸುತ್ತಿದ್ದು, ರೈತರು ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಸಂಪಾದನೆ ಇಲ್ಲದೆ ಬರಿಗೈ ಆಗಿರುವ ಬಹುಪಾಲು ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ.ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಅನ್ನದಾತರ ಹಣ ಬಾಕಿ ಉಳಿಸಿಕೊಂಡಿದೆ.

ಪ್ರತಿನಿತ್ಯ ಕಚೇರಿಗೆ ಬರುವ ರೈತರು ರಾಗಿ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಸರ್ಕಾರದತ್ತ ಬೆರಳು ತೋರುತ್ತಿದ್ದಾರೆ. ಹಣ ಬಿಡುಗಡೆಗೆ ಆಗ್ರಹಿಸಿ ಈಗಾಗಲೇ ರೈತರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮುಂಗಾರಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಉಳುಮೆಗೆ ಹಣ ಅಗತ್ಯವಾಗಿದೆ. ಬಹಳಷ್ಟು ರೈತರು ಒಂದಷ್ಟು ಉತ್ಪನ್ನಗಳನ್ನು ಮಾರಾಟ ಮಾಡಿ ಕೃಷಿ ಚಟುವಟಿಕೆ ಕೈಗೊಳ್ಳುವರು. ಆದರೆ, ರಾಗಿ ಹಣ ಬಿಡುಗಡೆ ಆಗದಿರುವುದರಿಂದ ಮುಂಗಾರಿನ ಈ ಸಂದರ್ಭದಲ್ಲಿ ರೈತರು ಸಂಕಷ್ಟ ಎದುರಿಸಬೇಕಾಗಿದೆ.

ಸರ್ಕಾರ ರಾಗಿ ಕ್ವಿಂಟಾಲ್‌ಗೆ ₹ 3,295 ಬೆಂಬಲ ಬೆಲೆ ಮತ್ತು 50 ಕೆ.ಜಿ ತೂಕದ ಚೀಲಕ್ಕೆ ₹ 22 ಬೆಲೆ ನಿಗದಿಪಡಿಸಿತ್ತು. ಜಿಲ್ಲೆಯ 9,768 ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಹೆಸರು ನೋಂದಾಯಿಸಿದ್ದರು.

ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು (ಕೆಎಫ್‌ಸಿಎಸ್‌ಸಿ) ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೋಲಾರ ಹಾಗೂ ಕೆಜಿಎಫ್‌ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿತ್ತು. ಜ.25ರಿಂದ ಏ.30ರವರೆಗೆ ಈ ಕೇಂದ್ರಗಳ ಮೂಲಕ 8,999 ಸಾವಿರ ರೈತರು 1,51,915 ಕ್ವಿಂಟಾಲ್‌ ರಾಗಿ ಮಾರಾಟ ಮಾಡಿದ್ದರು. ಒಟ್ಟಾರೆ ಜಿಲ್ಲೆಯಲ್ಲಿ ₹ 50.72 ಕೋಟಿ ಮೌಲ್ಯದ ರಾಗಿ ಖರೀದಿಯಾಗಿತ್ತು.

₹ 18.40 ಕೋಟಿ ಬಾಕಿ: ಜ.25ರಿಂದ ಮಾರ್ಚ್‌ 14ರವರೆಗೆ ರಾಗಿ ಮಾರಿದ್ದ 5,619 ರೈತರಿಗೆ ಮೊದಲ ಮತ್ತು ಎರಡನೇ ಕಂತಿನಲ್ಲಿ ₹ 32.31 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈ ಹಣ ರೈತರ ಬ್ಯಾಂಕ್‌ ಖಾತೆ ಸೇರಿದೆ. ಆದರೆ. ಮಾರ್ಚ್‌ 14ರ ನಂತರ ರಾಗಿ ಮಾರಾಟ ಮಾಡಿದ 3,380 ರೈತರ ₹ 18.40 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು ₹ 11.14 ಕೋಟಿ ಹಣ ಬಾಕಿಯಿದೆ. ಉಳಿದಂತೆ ಬಂಗಾರಪೇಟೆ ತಾಲ್ಲೂಕಿನ ₹ 1.88 ಕೋಟಿ, ಮಾಲೂರು ತಾಲ್ಲೂಕು ₹ 3.68 ಕೋಟಿ, ಮುಳಬಾಗಿಲು ತಾಲ್ಲೂಕು ₹ 55.28 ಲಕ್ಷ, ಶ್ರೀನಿವಾಸಪುರ ತಾಲ್ಲೂಕು ₹ 94.50 ಲಕ್ಷ ಮತ್ತು ಕೆಜಿಎಫ್‌ ತಾಲ್ಲೂಕಿನ ₹ 19.29 ಲಕ್ಷ ಬಾಕಿಯಿದೆ.

ಕೋವಿಡ್‌ ಮತ್ತು ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲೂ ರಾಗಿ ಹಣ ತಡೆ ಹಿಡಿಯಲಾಗಿದೆ. 3,380 ರೈತರು ತಮಗೆ ಮೂರನೇ ಕಂತಿನಲ್ಲಿ ಶೀಘ್ರವೇ ಹಣ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲೇ ದಿನ ದೂಡುತ್ತಿದ್ದಾರೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT