ಕೋಲಾರ: ‘ಮಕ್ಕಳಿಗೆ ಪಠ್ಯ ಬೋಧನೆ ಜತೆಗೆ ನೈತಿಕ ಮೌಲ್ಯ ಬೆಳೆಸುವುದರಿಂದ ಹಿರಿಯರ ಮಹತ್ವದ ಅರಿವಾಗಿ ವೃದ್ಧಾಶ್ರಮ ಸಂಸ್ಕೃತಿ ದೂರವಾಗುತ್ತದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್ ಅಭಿಪ್ರಾಯಪಟ್ಟರು.
ಇಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಮಕ್ಕಳ ಶೈಕ್ಷಣಿಕ ಕಲಿಕಾ ಸಾಮರ್ಥ್ಯ ಸಮೀಕ್ಷೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತಿದೆ. ರ್ಯಾಂಕ್, ಉನ್ನತ ಶ್ರೇಣಿ ಫಲಿತಾಂಶ ಬರುತ್ತಿದ್ದರೂ ಸಮಾಜದ ಸ್ವಾಸ್ಥ್ಯ ಕಾಪಾಡುವ ವಾತಾವರಣ ಮಾಯವಾಗುತ್ತಿದೆ’ ಎಂದು ವಿಷಾದಿಸಿದರು.
‘ಮಕ್ಕಳಿಗೆ ಪಠ್ಯ ಬೋಧನೆ ಜತೆಗೆ ಗುರು ಹಿರಿಯರನ್ನು ಗೌರವಿಸುವ, ಅವಿಭಕ್ತ ಕುಟುಂಬದ ಮಹತ್ವ ಕುರಿತು ತಿಳಿ ಹೇಳಬೇಕು. ನೈತಿಕ ಅಧಃಪತನಕ್ಕೆ ಅವಕಾಶವಿಲ್ಲದಂತೆ ಮಕ್ಕಳನ್ನು ಸಮಾಜದ ಆಸ್ತಿಯಾಗಿಸಬೇಕು. ಮಕ್ಕಳ ಕಲಿಕಾ ಸಾಮರ್ಥ್ಯದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವುದರಿಂದ ಶಿಕ್ಷಣಕ್ಕೆ ಸಂಬಂಧಿಸಿದ ಹೊಸ ಯೋಜನೆಗಳ ಘೋಷಣೆಗೆ ಮತ್ತು ಅನುಷ್ಠಾನಕ್ಕೆ ಸಹಕಾರಿಯಾಗುತ್ತದೆ’ ಎಂದರು.
‘ಈ ಸಮೀಕ್ಷೆಯಿಂದ ಬಿ.ಇಡಿ ವಿದ್ಯಾರ್ಥಿಗಳ ಮುಂದಿನ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತದೆ. ಮಕ್ಕಳಲ್ಲಿನ ಸಾಮರ್ಥ್ಯವನ್ನು ವಿವಿಧ ಆಯಾಮಗಳ ಮೂಲಕ ಸಮೀಕ್ಷೆ ನಡೆಸುವ ವಿಧಾನದ ಅನುಭವವೂ ಆಗುತ್ತದೆ. ಇಂತಹ ಸಮೀಕ್ಷೆಗಳ ಆಧಾರದಲ್ಲಿ ಸರ್ಕಾರ ಶಿಕ್ಷಣದ ಬಲವರ್ಧನೆಗೆ ಹೊಸ ಯೋಜನೆ ರೂಪಿಸಬಹುದು’ ಎಂದು ಹೇಳಿದರು.
ವಕೀಲ ಕೆ.ಆರ್.ಧನರಾಜ್, ಬಂಗಾರಪೇಟೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಪ್ಪ, ಗೋಲ್ಡನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅರುಣೋದಯ, ಪ್ರಾಂಶುಪಾಲೆ ಪೂರ್ಣಿಮಾ, ಪ್ರಾಧ್ಯಾಪಕರಾದ ಸವಿತಾ, ಮುಕ್ತಾ ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತಮ್ಮ ಪಾಲ್ಗೊಂಡಿದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.