ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಸಂದರ್ಶನ | ಸೋತಿದ್ದರೂ ರಾಜಕೀಯದಲ್ಲಿ ಮುಂದುವರಿಯುತ್ತಿದ್ದೆ: ಮಲ್ಲೇಶ್‌ ಬಾಬು

ಕೆ.ಎಚ್‌.ಮುನಿಯಪ್ಪ ಬೆಂಬಲಿಗರ ನೆರವು ಕೋರಿದ್ದೆ: ಬಾಬು
Published : 7 ಜೂನ್ 2024, 5:41 IST
Last Updated : 7 ಜೂನ್ 2024, 5:41 IST
ಫಾಲೋ ಮಾಡಿ
Comments
ಪ್ರ

ರಾಜ್ಯ ಕಾಂಗ್ರೆಸ್‌ ಸರ್ಕಾರ ಒಂದೇ ವರ್ಷದಲ್ಲಿ ಜನರ ವಿಶ್ವಾಸ ಕಳೆದುಕೊಂಡಿತೇ?

ಕಾಂಗ್ರೆಸ್‌ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಹೆಚ್ಚಿನ ಜನರಿಗೆ ತಲುಪುತ್ತಿಲ್ಲ. ಗೆದ್ದ ಮೇಲೆ ಅಲ್ಲ; ಬಹಳ ದಿನಗಳಿಂದಲೂ ನಾನು ಇದೇ ಮಾತು ಹೇಳುತ್ತಿದ್ದೇನೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಹೊರತುಪಡಿಸಿ ಇನ್ನುಳಿದ ನಾಲ್ಕು ಯೋಜನೆಗಳು ಎಲ್ಲರಿಗೂ ಸೇರುತ್ತಿಲ್ಲ. ಈ ಬಗ್ಗೆ ಜನರಿಗೆ ಅಸಮಾಧಾನ ಇದೆ. ಸರ್ಕಾರ ಮಾತ್ರ ತಪ್ಪು ಭಾವನೆ ಹೊಂದಿದೆ.

ಪ್ರ

ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಆ ಪಕ್ಷದ ಶಾಸಕರ ನಡುವಿನ ಮನಸ್ತಾಪ ನಿಮಗೆ ವರವಾಯಿತೇ?

ಇಂಥ ವಿಚಾರಗಳು ಖಂಡಿತ ನೆರವಾಗುತ್ತವೆ. ಯಾವುದೇ ಪಕ್ಷದ ಪ್ರಮುಖ ನಾಯಕರನ್ನು ಕಡೆಗಣಿಸಿದಾಗ ಅವರ ಬೆಂಬಲಿಗರು, ಅಭಿಮಾನಿಗಳು ಬೇಸತ್ತು ತಿರುಗಿ ಬೀಳುತ್ತಾರೆ. ನಾನು ಕೂಡ ಅವರ ಬೆಂಬಲಿಗರನ್ನು ಮಾತನಾಡಿಸಿ ನೆರವು ಕೋರಿದ್ದು ನಿಜ. ಆದರೆ, ಮುನಿಯಪ್ಪ ಜೊತೆ ಮಾತನಾಡಿರಲಿಲ್ಲ.

ಪ್ರ

ತಮ್ಮ ಗೆಲುವಿನಲ್ಲಿ ಹೆಚ್ಚು ಕೆಲಸ ಮಾಡಿದ್ದು ಜೆಡಿಎಸ್ ಕಾರ್ಯಕರ್ತರೇ ಅಥವಾ ಬಿಜೆಪಿ ಕಾರ್ಯಕರ್ತರೇ?

ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಲ್ಲವೆಂದರೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಜೆಡಿಎಸ್‌, ಬಿಜೆಪಿ ಸಮನ್ವಯ ಸಮಿತಿ ಮಾಡಿದಾಗಿನಿಂದ ಹಿಡಿದು ಮತದಾನದವರೆಗೆ ಒಗ್ಗಟ್ಟಾಗಿ ಶ್ರಮಿಸಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿರುತ್ತೇನೆ.

ಪ್ರ

ತಮ್ಮ ಗೆಲುವಿನಲ್ಲಿ ತಾಯಿ ಮಂಗಮ್ಮ ಮುನಿಸ್ವಾಮಿ ಪಾತ್ರ ಎಷ್ಟಿದೆ?

ನನ್ನ ತಾಯಿ ರಾಜಕಾರಣ ಪ್ರವೇಶಿಸಿದಾಗಿನಿಂದ ಸಿದ್ಧಾಂತಕ್ಕೆ ಬದ್ಧರಾಗಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಬಂಗಾರಪೇಟೆ, ಕೋಲಾರ ಹಾಗೂ ಸ್ವಲ್ಪಮಟ್ಟಿಗೆ ಮುಳಬಾಗಿಲು ಕ್ಷೇತ್ರದವರಿಗೆ ಮಾತ್ರ ನಾನು ಯಾರೆಂದು ಗೊತ್ತಿತ್ತು. ತಾಯಿಗೆ ಎಲ್ಲಾ ಕ್ಷೇತ್ರಗಳ ಪರಿಚಯವಿತ್ತು. ಇಂಥವರ ಮಗ ಎಂದು ನನ್ನನ್ನು ಗುರುತಿಸುತ್ತಿದ್ದರು. ತಾಯಿ ಹಾಗೂ ತಂದೆ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿವೆ.

ಪ್ರ

ಕಾಂಗ್ರೆಸ್ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ನಿಮಗೆ ಬೆಂಬಲ ನೀಡುವ ವಿಶ್ವಾಸ ಇದೆಯೇ?

ಜೆಡಿಎಸ್‌ ಗೆಲ್ಲಲಿ, ಬಿಜೆಪಿ ಗೆಲ್ಲಲಿ, ಕಾಂಗ್ರೆಸ್‌ ಗೆಲ್ಲಲಿ ಜನರಿಗೆ ಕೆಲಸ ಮಾಡಿಕೊಡುವುದೇ ಎಲ್ಲರ ಉದ್ದೇಶ. ಚುನಾವಣೆ ನಡೆದಿದ್ದು ಯಾರಿಗೋಸ್ಕರ ಹೇಳಿ. ಅಭಿವೃದ್ಧಿ ವಿಚಾರ ಬಂದಾಗ ಪಕ್ಷಗಳನ್ನು ಆಚೆಗಿಟ್ಟು ಜನತೆಗೆ ಒಳ್ಳೆಯದು ಮಾಡಬೇಕು. ಬೆಂಬಲ ಸಿಗುವ ವಿಶ್ವಾಸವಿದೆ.

ಪ್ರ

ಕೋಲಾರ ಅಭಿವೃದ್ಧಿಗೆ ಆದ್ಯತೆಗಳು ಏನೇನು? 

ಯುವಕರಿಗೆ ಉದ್ಯೋಗ, ನೀರಾವರಿ ಯೋಜನೆ ಜಾರಿ ನನ್ನ ಮೊದಲ ಆದ್ಯತೆ. ಕ್ಷೇತ್ರದ ಜೆಡಿಎಸ್‌ ಶಾಸಕರು ಸೇರಿದಂತೆ ಎಲ್ಲಾ ಮುಖಂಡರ ಗುರಿಯೂ ಅದೇ ಆಗಿದೆ. ಎಚ್‌.ಡಿ. ಕುಮಾರಸ್ವಾಮಿ ಸಚಿವರಾಗಬಹುದೆಂಬ ಚರ್ಚೆ ಇದೆ. ಅವರ ನೆರವಿನಿಂದ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕುತ್ತೇವೆ

ಪೋಷಕರ ಹೆಸರು ಉಳಿಸಿದ್ದೇನೆ ಕುಮಾರಣ್ಣ ದೇವೇಗೌಡರ ನಂಬಿಕೆ ಉಳಿಸಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್‌ ಎಷ್ಟು ಬಲಿಷ್ಠವಾಗಿದೆ ಎಂಬುದು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಗೊತ್ತಾಗಿದೆ.
– ಎಂ.ಮಲ್ಲೇಶ್‌ ಬಾಬು, ಸಂಸದ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT