ಕೋಲಾರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತರ ಬ್ಯಾಂಕ್ ಖಾತೆಗೆ ಸೇರಲು ಅಗತ್ಯವಾಗಿರುವ ಇ-ಕೆವೈಸಿಯನ್ನು ಜೂನ್ 30 ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ, ಫಲಾನುಭವಿ ರೈತರಿಗೆ ಮನವಿ ಮಾಡಿದ್ದಾರೆ.
‘ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಈ ಯೋಜನೆಯಡಿ ಪ್ರತಿ ವರ್ಷ ₹ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹ 4 ಸಾವಿರವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈ ಯೋಜನೆ ಪ್ರಾರಂಭಗೊಂಡ ಮೇಲೆ ಇದುವರೆಗೆ ರೈತರ ಬ್ಯಾಂಕ್ ಖಾತೆಗಳಿಗೆ 13 ಕಂತುಗಳಲ್ಲಿ ಹಣ ಜಮೆಯಾಗಿದ್ದು 14 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 14ನೇ ಕಂತಿನ ಹಣ ಬರುವ ಸಮಯದಲ್ಲಿ ಪ್ರತಿ ರೈತರು ಇ-ಕೆವೈಸಿ ನೋಂದಾಯಿಸಲು ಸೂಚಿಸಲಾಗಿದೆ’ ಎಂದಿದ್ದಾರೆ.
‘ಜಿಲ್ಲೆಯಲ್ಲಿ 21,118 ರೈತರು ಇನ್ನೂ ಇ -ಕೆವೈಸಿ ಮಾಡಿಸಬೇಕಿದ್ದು, ಹತ್ತಿರದ ಗ್ರಾಮ ಒನ್, ಸಿಎಸ್ಸಿ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಮಾಡಿಸಬಹುದಾಗಿದೆ. ಮೊಬೈಲ್ಗಳಲ್ಲಿಯೇ ಆಧಾರ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ’ ಎಂದು ತಿಳಿಸಿದ್ದಾರೆ.
‘ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಹಣವನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಹಣ ಕೈಸೇರಲು ಕಡ್ಡಾಯವಾಗಿ ರೈತರು ಆಧಾರ್ ಆಧಾರಿತ ಇ-ಕೆವೈಸಿ ಮಾಡಬೇಕಾಗಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.