ಕೆಜಿಎಫ್: ‘ಮಾತೃಭಾಷೆಯನ್ನು ಪ್ರೇಮಿಸುತ್ತಿದ್ದರೂ, ದೇಶದ ವಿಷಯ ಬಂದಾಗ ಎಲ್ಲಾ ಭಾಷಿಕರು ಒಂದೇ ಎನ್ನುವ ಭಾವನೆಯನ್ನು ಭಾರತೀಯರು ಹೊಂದಿದ್ದಾರೆ. ಇದು ವಿವಿಧತೆಯಲ್ಲಿ ಏಕತೆಯ ದ್ಯೋತಕ’ ಎಂದು ನ್ಯಾಯಾಧೀಶ ದಯಾನಂದ ಹಿರೇಮಠ ಹೇಳಿದರು.
ರಾಬರ್ಟಸನ್ಪೇಟೆಯ ವಿವೇಕಾನಂದ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಏಕತಾ ದಿನಾಚರಣೆ ಮತ್ತು ಭಾಷಾ ಸೌಹಾರ್ದ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಜಿಎಫ್ ನಗರದಲ್ಲಿ ವಿವಿಧ ಭಾಷೆ ಮಾತನಾಡುವ ಜನ ಹೆಚ್ಚಾಗಿದ್ದಾರೆ. ಆದರೆ ಎಲ್ಲರೂ ಅಣ್ಣ, ತಮ್ಮಂದಿರ ರೀತಿಯಲ್ಲಿ ಬಾಳ್ವೆ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ. ಭಾಷೆ ಮತ್ತು ದೇಶದ ಬಗ್ಗೆ ನಾವು ತೋರುತ್ತಿರುವ ಪ್ರೀತಿಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ನ್ಯಾಯಾಧೀಶೆ ಎಂ.ಡಿ. ರೂಪಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್,ಕನ್ನಡ ಸಂಘ, ತಮಿಳು ಸಂಘ ಮತ್ತು ಮಲಯಾಳಿ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.