ಕೋಲಾರ: ‘ಇಷ್ಟು ದಿನ ರಾಮನ ಮೇಲೆ ಇದ್ದ ಕೋಪವನ್ನು ಸಿದ್ದರಾಮಯ್ಯ ಈಗ ಹನುಮನ ಮೇಲೆ ತೋರಿಸುತ್ತಿದ್ದಾರೆ. ಮಂಡ್ಯದಲ್ಲಿ ಹನುಮಧ್ವಜ ಹಾರಿಸಲು ಬಿಡುತ್ತಿಲ್ಲ. ಕಳ್ಳರ ರೀತಿ ಪೊಲೀಸರಿಂದ ತೆರವುಗೊಳಿಸಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಲ್ಲಿನ ಜನರೇ ದುಡ್ಡು ಹಾಕಿ ಧ್ವಜ ಸ್ತಂಭ ಸ್ಥಾಪಿಸಿದ್ದಾರೆ. ಹನುಮಧ್ವಜ ಹಾರಿಸಲು ಮೂರು ತಿಂಗಳದ ಹಿಂದೆ ಪಂಚಾಯಿತಿಯ ಅನುಮತಿ ಕೂಡ ಪಡೆದಿದ್ದಾರೆ. ಆದರೆ, ಸಿದ್ದರಾಮಯ್ಯ ಯಾವುದೋ ದಾಖಲೆ ನೀಡುತ್ತಿದ್ದಾರೆ’ ಎಂದರು.
‘ಜನರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸುತ್ತೇನೆ. ಹನುಮಧ್ವಜ ಕೀಳಲು ನಿಮಗೆ ಯಾವ ಅಧಿಕಾರವಿದೆ, ಯಾವಾಗ ರಾಷ್ಟ್ರಧ್ವಜ ಹಾರಿಸಬೇಕು ಎಂಬುದು ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.
‘ಹನುಮಧ್ವಜ ಕಿತ್ತು ಬಿಸಾಕಿರುವ ಕಾಂಗ್ರೆಸ್ನವರಿಗೆ ಖಂಡಿತ ಶಾಪ ತಟ್ಟಲಿದೆ. ಜನರೇ ತಕ್ಕ ಪಾಠ ಕಲಿಸುವ ಕಾಲ ಹತ್ತಿರದಲ್ಲೇ ಇದೆ’ ಎಂದರು.