ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ದ್ವಿಚಕ್ರ ವಾಹನಗಳ ಮೇಲೆ ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಲಾಕ್ ಡೌನ್ ಪ್ರಾರಂಭವಾದ ನಂತರ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತಿಚೆಗಷ್ಟೇ ಪಟ್ಟಣದ ಹೊರ ವಲಯದಲ್ಲಿ ನಾಲ್ಕು ಜನರು ಪ್ರಯಾಣಿಸುತ್ತಿದ್ದ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಅದರಲ್ಲೂ ನಿಯಮಬಾಹಿರವಾಗಿ ಬೈಕ್ ಮೇಲೆ ಪ್ರಯಾಣಿಸುವ ವ್ಯಕ್ತಿಗಳು ಬಿದ್ದು ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರ ಕಣ್ಣು ತಪ್ಪಿಸಲು ಮುಖ್ಯ ರಸ್ತೆ ಬಿಟ್ಟು ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವುದು ಹೆಚ್ಚಿದೆ.
ಬೇರೆ ಊರುಗಳಿಗೆ ಹೋಗುವವರು, ಗಡಿದಾಟಿ ಬೇರೆ ರಾಜ್ಯಗಳಿಗೆ ಹೋಗಬೇಕಾದವರೂ ದ್ವಿಚಕ್ರ ವಾಹನಗಳನ್ನು ಅವಲಂಬಿಸಿದ್ದಾರೆ. ಮಿತಿ ಮೀರಿ ವಾಹನಗಳ ಮೇಲೆ ಪ್ರಯಾಣಿಸುವುದು ಕಾನೂನು ಬಾಹಿರ ಎಂಬ ಅರಿವಿನ ಕೊರತೆ ಇಲ್ಲದಿದ್ದರೂ, ಸಂದರ್ಭ ಅಂಥ ಪರಿಸ್ಥಿತಿಗೆ ದೂಡಿದೆ ಎನ್ನುತ್ತಾರೆ ಪ್ರಯಾಣಿಕರು.