ಕೆಜಿಎಫ್: ‘ತ್ಯಾಗದ ಪ್ರತಿರೂಪ ಎಂದು ಹೆಣ್ಣನ್ನು ಬಣ್ಣಿಸುವುದರಲ್ಲಿ ಅತಿಶಯೋಕ್ತಿ ಇಲ್ಲ. ಎಲ್ಲರ ಜೀವನದಲ್ಲಿ ಹೆಣ್ಣಿನ ಪಾತ್ರ ಬಹುದೊಡ್ಡದಾಗಿದ್ದು, ಆಕೆಯನ್ನು ಗೌರವಿಸುವುದು ಎಲ್ಲರ ಕರ್ತವ್ಯ’ ಎಂದು ನ್ಯಾಯಾಧೀಶ ಮಹೇಶ್ ಶಂ ಪಾಟೀಲ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣ ದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತಾಯಿ, ತಂಗಿ, ಹೆಂಡತಿ ಮೊದಲಾದ ರೂಪದಲ್ಲಿ ಹೆಣ್ಣನ್ನು ನೋಡುವ ನಾವು ಸಾಮಾಜಿಕವಾಗಿ ಆಕೆಯನ್ನು ಶೋಷಿಸುವುದು ತಪ್ಪು. ಹೆಣ್ಣು ಇಲ್ಲದ ಸಮಾಜವನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದರು.
ನ್ಯಾಯಾಧೀಶೆ ನಸ್ರತ್ ಮುಖತಾರ್ ಅಹಮದ್ ಖಾನ್ ಮಾತನಾಡಿ, ಹೆಣ್ಣು ಮಕ್ಕಳ ಬಗೆಗಿನ ಮನಸ್ಥಿತಿಯನ್ನು ನಾವು ಬದಲಾಯಿಸಿಕೊಂಡರೆ ಸಮಾಜದಲ್ಲಿ ಹೆಣ್ಣಿಗೆ ಗೌರವ ಸಹಜವಾಗಿಯೇ ಸಿಗುತ್ತದೆ ಎಂದರು.
‘ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯುವುದೇ ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿತ್ತು. ಅವರಿಗೆ ಸಾಮಾಜಿಕವಾಗಿ ಎಲ್ಲಾ ರೀತಿಯಲ್ಲಿ ಭೇದಭಾವ ತೋರಲಾಗುತ್ತಿತ್ತು. ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯಲು ಕೂಡ ಹೆಣಗಾಡಬೇಕಾಗುತ್ತಿತ್ತು’ ಎಂದು ಉಪನ್ಯಾಸಕಿ ನೂರ್ಜಾನ್ ಹೇಳಿದರು.
ನ್ಯಾಯಾಧೀಶರಾದ ಆರ್. ಮಂಜುನಾಥ್, ಎಸ್.ಪಿ. ಕಿರಣ್, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ ಇದ್ದರು.