ಮಾಲೂರು: 15ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಅಂದಿನ ಅಂಕು-ಡೊಂಕುಗಳನ್ನು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದ ಮಹಾ ಯೋಗಿ ವೇಮನರ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪ ಎಂದುಪುರಸಭಾ ಸದಸ್ಯ ಎಂ.ವಿ.ವೇಮನ್ನ ತಿಳಿಸಿದರು.
ಪಟ್ಟಣದ ಪುರಸಭೆಯ ಕಚೇರಿ ಸಭಾಂಗಣದಲ್ಲಿ ಪುರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇಮನರ ಅನೇಕ ವಚನಗಳು ಇಂದಿಗೂ ಪ್ರಸ್ತುತವಾಗಿದೆ. ಅವುಗಳನ್ನು ಪ್ರತಿಯೊಬ್ಬರು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರ್ನಾಟಕದ ಸರ್ವಜ್ಞ, ತಮಿಳಿನ ತಿರುವಳ್ಳವರ್ ರೀತಿಯಲ್ಲಿ ತೆಲುಗು ಭಾಷೆಯಲ್ಲಿ ಲೋಕಾನುಭವವನ್ನು ಸೇರಿಸಿ ತಕ್ಷಣವೇ ಪದಕಟ್ಟುವ ಮೂಲಕ ಜನರ ತಪ್ಪುಗಳನ್ನು ತಿಳಿಸಿ ಸರಿದಾರಿಗೆ ತರಲು ಪ್ರಯತ್ನಿಸಿದರು. ತಮ್ಮ ವಚನಗಳ ಮೂಲಕ ಎಲ್ಲರನ್ನೂ ಧಾರ್ಮಿಕತೆಯತ್ತ ಕರೆದೊಯ್ಯುವ ಪ್ರಯತ್ನ ಮಾಡಿದ್ದರು. ಈ ನಿಟ್ಟಿನಲ್ಲಿ ಇಂದಿನ ಸಮಾಜದಲ್ಲಿ ವಚನಕಾರರ ವಚನಗಳು ಸರ್ವಕಾಲಿಕವಾಗಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಎನ್.ವಿ.ಮುರಳೀಧರ್, ಸದಸ್ಯ ಜಾಕೀರ್ ಖಾನ್, ಮಾಜಿ ಸದಸ್ಯ ಅಪ್ಸರ್ ಪಾಷ, ಪುರಸಭೆ ಅಧಿಕಾರಿ ಮಂಜುನಾಥ್ ಇದ್ದರು.